



ದೆಹಲಿ: ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ದೇಶವು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಯೋಮೆಟ್ರಿಕ್ ಡೇಟಾವನ್ನು ಬಳಸಿಕೊಂಡು ಕೇವಲ 35 ಸೆಕೆಂಡುಗಳಲ್ಲಿ ಶಂಕಿತರ ಗುರುತನ್ನು ತಕ್ಷಣವೇ ಪರಿಶೀಲಿಸುವ ‘ಅಭಿಜ್ಞಾನ್’ ಎಂಬ ವಿಶೇಷ ಮೊಬೈಲ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಅತ್ಯಾಧುನಿಕ ಆಪ್ ಅನ್ನು ಲೋಕಾರ್ಪಣೆಗೊಳಿಸಿದ್ದು, ಇದು ತನಿಖಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.
ಈ ಮೊಬೈಲ್ ಅಪ್ಲಿಕೇಶನ್ ಅನ್ನು ನೇರವಾಗಿ ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ ಯೊಂದಿಗೆ ಸಂಯೋಜಿಸಲಾಗಿದೆ. ಈ ಕೇಂದ್ರ ಇಲಾಖೆಯು ದೇಶದಾದ್ಯಂತ ಸುಮಾರು 1.29 ಕೋಟಿಗೂ ಹೆಚ್ಚು ಅಪರಾಧಿಗಳ ಬಯೋಮೆಟ್ರಿಕ್ ದಾಖಲೆಗಳನ್ನು ಹೊಂದಿದೆ. ತನಿಖಾ ಅಧಿಕಾರಿಗಳು ಸ್ಥಳದಲ್ಲೇ ಅಥವಾ ಪೊಲೀಸ್ ಠಾಣೆಯಲ್ಲಿ ಶಂಕಿತರ ಬೆರಳಚ್ಚನ್ನು ಸ್ಕ್ಯಾನ್ ಮಾಡಿದಾಗ, ಈ ಆಪ್ ಕೇವಲ 35 ಸೆಕೆಂಡುಗಳಲ್ಲಿ ರಾಷ್ಟ್ರೀಯ ಡೇಟಾಬೇಸ್ನೊಂದಿಗೆ ತಾಳೆ ನೋಡಿ ಫಲಿತಾಂಶವನ್ನು ನೀಡುತ್ತದೆ.
ಈ ಹಿಂದೆ ಶಂಕಿತರ ಗುರುತು ಪತ್ತೆ ಹಚ್ಚಲು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ದಿನಗಟ್ಟಲೆ ಕಾಯಬೇಕಾಗಿತ್ತು. ಆದರೆ ಈಗ ‘ಅಭಿಜ್ಞಾನ್’ ಆಪ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ನಿಖರ ಮಾಹಿತಿ ಲಭ್ಯವಾಗಲಿದೆ.
ಈ ತಂತ್ರಜ್ಞಾನವು ಹಳೇ ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಅಪರಿಚಿತ ಶಂಕಿತರ ಗುರುತನ್ನು ಖಚಿತಪಡಿಸಿಕೊಳ್ಳಲು ಕ್ಷೇತ್ರ ಮಟ್ಟದ ಪೊಲೀಸರಿಗೆ ವರದಾನವಾಗಲಿದೆ. ಇದು ಕಾಗದದ ದಾಖಲೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ತಂತ್ರಜ್ಞಾನ ಆಧಾರಿತ ಆಧುನಿಕ ಪೊಲೀಸ್ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ.
ದಿನಕಳೆದಂತೆ ಹೊಸ ಅಪರಾಧಿಗಳ ದಾಖಲೆಗಳು ಈ ವ್ಯವಸ್ಥೆಗೆ ಸೇರ್ಪಡೆಯಾಗುವುದರಿಂದ, ಮುಂದಿನ ದಿನಗಳಲ್ಲಿ ಈ ಆಪ್ನ ನಿಖರತೆ ಮತ್ತು ವ್ಯಾಪ್ತಿ ಮತ್ತಷ್ಟು ಹೆಚ್ಚಾಗಲಿದೆ. ಇದು ಅಪರಾಧ ತನಿಖೆಯನ್ನು ವೇಗಗೊಳಿಸುವುದಲ್ಲದೆ, ಅಪರಾಧಿಗಳಿಗೆ ಕಾನೂನಿನ ಭಯ ಹುಟ್ಟಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.








