ಮ್ಯಾಚ್ ಸೋತ ಒಂದೇ ವಿಚಾರಕ್ಕೆ ಕೋಪಗೊಂಡಿದ್ದ ಸಿಎಸ್ಕೆ ತಂಡದ ಅಭಿಮಾನಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯ 6 ವರ್ಷದ ಮಗಳನ್ನು ಅತ್ಯಾಚಾರ ಎಸಗುವ ಬೆದರಿಕೆ ಒಡ್ಡಿದ್ದ. ಈ ಘಟನೆ ಮಾಸುವ ಮುನ್ನವೇ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಮುಂದಾಗಿದ್ದ ನಟ ವಿಜಯ್ ಸೇತುಪತಿ ಮಗಳಿಗೆ ಈಗ ಅತ್ಯಾಚಾರದ ಬೆದರಿಕೆ ಬಂದಿದೆ. ಈ ಎರಡು ಘಟನೆಗಳನ್ನು ನೋಡಿದಾಗ ಅತ್ಯಾಚಾರ ಎಂಬುದು ಇಷ್ಟು ಸಾಮಾನ್ಯ ವಿಚಾರವಾ? ಹೆಣ್ಣು ಮಕ್ಕಳೆಂದರೆ ಅತ್ಯಾಚಾರಕ್ಕೆ ಒಳಗಾಗುವವರಾ? ತಪ್ಪಿಲ್ಲದಿದ್ದರೂ ಅವರು ಬಲಿಪಶುಗಳಾ ? ಎಂಬ ಅನುಮಾನ ಕಾಡಲಾರಂಭಿಸಿದೆ.
ಬಹಿರಂಗವಾಗಿ ಈ ರೀತಿ ಬೆದರಿಕೆ ಬಂದರೆ, ಸಮಾಜ ಮಹಿಳೆಯರಿಗೆ ಎಷ್ಟು ಸುರಕ್ಷೆ ಎಂಬ ಪ್ರಶ್ನೆ ಮೂಡಿಸಿದೆ. ಅತ್ಯಾಚಾರ ಬೆದರಿಕೆಯನ್ನು ಈ ರೀತಿ ಧೈರ್ಯವಾಗಿ ಹಾಕುತ್ತಿರಬೇಕಾದರೆ, 21ನೇ ಶತಮಾನದ ಮಹಿಳೆ ಸಬಲೆಯಲ್ಲ ಅಬಲೆ ಎಂಬ ಸಂದೇಶ ಸಾರಲಾಗುತ್ತಿದೆ. ಯಾರದೋ ತಪ್ಪಿಗೆ ಇಲ್ಲಿ ಮಹಿಳೆಯೇ ಬಲಿಪಶು ಎಂಬುದು ಸಾಬೀತಾಗುತ್ತಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ 2019ರ ವರದಿ ಪ್ರಕಾರ, ದಿನವೊಂದಕ್ಕೆ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಈ ಅಂಕಿ ಅಂಶಗಳು ಮಹಿಳೆಯ ಸುರಕ್ಷತೆಯನ್ನು ತಿಳಿಸುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಹೆದರಿಕೆ ಇಲ್ಲದೇ ಈ ರೀತಿ ಬಹಿರಂಗವಾಗಿ ಬೆದರಿಕೆಗಳು ಬರುತ್ತಿದೆ ಎಂದರೆ, ಹೆಣ್ಣು ದಮನಕ್ಕೆ ಒಳಗಾದವಳು ಎಂಬ ಮನಸ್ಥಿತಿಯೋ ಅಥವಾ ಕಾನೂನಿನ ಶಿಕ್ಷೆ ಕಠಿಣವಲ್ಲ ಎಂಬ ಮನಸ್ಥಿತಿಯೋ ಎಂಬ ಬಗ್ಗೆಯೇ ಅನುಮಾನ ಮೂಡುತ್ತಿದೆ.