ಮಂಗಳೂರು: ಮಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿಯವರ ಮೇಲೆ ಅಪರಿಚಿತ ದುರ್ಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಗಂಭೀರ ಪ್ರಕರಣ ಮಲ್ಲೂರಿನಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಬದ್ರಿಯಾನಗರ ಕ್ರಿಕೆಟ್ ಮೈದಾನದಲ್ಲಿ ನಿಂತಿದ್ದ 6 ಮಂದಿಯ ಅಪರಿಚಿತ ಗುಂಪೊ0ದು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲಿಸದೇ ಇರುವುದನ್ನು ಗಮನಿಸಿದ ಪಿಡಿಒ ಸ್ಥಳಕ್ಕೆ ತೆರಳಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲಿಸುವಂತೆ ಹೇಳಿದ್ದಾರೆ. ಮಾತ್ರವಲ್ಲ ತಮ್ಮ ಮೊಬೈಲಿನಿಂದ ಪೋಟೋ ಕ್ಲಿಕ್ಕಿಸಿ ಅಲ್ಲಿಯೇ ಇರುವ ಪಂಚಾಯತ್ಗೆ ತೆರಳಿದ್ದಾರೆ.
ಇದರಿಂದ ಕೋಪಗೊಂಡ ಗುಂಪು ನೇರವಾಗಿ ಪಂಚಾಯತ್ಗೆ ನುಗ್ಗಿ ದಾಂಧಲೆ ನಡೆಸಿದ್ದು, ಪಿಡಿಓ ಅವರ ಮೊಬೈಲ್ ಕಸಿದು ಪೋಟೋ ಡಿಲೀಟ್ ಮಾಡಿದ್ದಾರೆ. ಸಿಬ್ಬಂದಿಗಳ ಸಮ್ಮುಖದಲ್ಲೇ ಕರ್ತವ್ಯ ನಿರತ ಪಿಡಿಓ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬ0ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವರು ಗಾಂಜಾ ವ್ಯಸನಿಗಳೆಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.