ಬಂಟ್ವಾಳ(ಅ 21): ಜಿಲ್ಲಾದ್ಯಂತ ಸಂಚಲನ ಮೂಡಿಸಿದ ಸುರೇಂದ್ರ ಬಂಟ್ವಾಳ ಅವರ ಕೊಲೆಯ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದು, ಸುರೇಂದ್ರ ಅವರು ತನ್ನ ಆಪ್ತನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ 9:30 ರ ಸುಮಾರಿಗೆ ಎಂದಿನಂತೆ ಸುರೇಂದ್ರ ಬಂಟ್ವಾಳ್ ಅವರು ತನ್ನ ಫ್ಲ್ಯಾಟ್ ಗೆ ಬಂದಿದ್ದು, ಆ ವೇಳೆ ಅವರ ರೂಮ್ ನಲ್ಲಿ ಜೊತೆಯಲ್ಲೇ ಇರುವ ಸತೀಶ್ ಕುಲಾಲ್ ಯಾನೆ ಪುಷ್ಟಿ ಹಾಗೂ ಆತನ ಇನ್ನೊಬ್ಬ ಗೆಳೆಯ ಇದ್ದರೆಂಬ ಮಾಹಿತಿ ಲಭ್ಯವಾಗಿದೆ.
ಸುರೇಂದ್ರ ಅವರು ರೂಂ ಗೆ ಬಂದ ಕೆಲ ಸಮಯದ ಬಳಿಕ ಸತೀಶ್ ಕುಲಾಲ್ ಹಾಗೂ ಆತನ ಜೊತೆಗೆ ಹೆಲ್ಮೆಟ್ ಧಾರಿಯೊಬ್ಬ ರೂಮ್ ಲಾಕ್ ಮಾಡಿ ರೂಮ್ ನಿಂದ ಹೊರಬಂದಿದ್ದಾನೆ, ನಂತರ ಗೇಟ್ ಬಳಿ ಇದ್ದ ವಾಚ್ ಮನ್ ಅನ್ನು ಸತೀಶ್ ಮಾತನಾಡಿಸಿದ್ದು, ಊಟದ ವಿಚಾರವಾಗಿ ಮಾತನಾಡಿಸಿದ್ದಾನೆ ಎನ್ನಲಾಗಿದೆ. ಇಂದು ಮಧ್ಯಾಹ್ನ ಪೋಲಿಸರು ರೂಂ ಗೆ ಪ್ರವೇಶಿಸಿದಾಗ ಸೋಫಾದ ಮೇಲೆ ಸುರೇಂದ್ರ ಬಂಟ್ವಾಳ್ ಶವ ದೇಹವನ್ನು ಕೊಚ್ಚಿದ ಸ್ಥಿತಿಯಲ್ಲಿ ಸೋಫಾದ ಮೇಲೆಯೇ ಪತ್ತೆಯಾಗಿದ್ದು ನೆಲದ ಮೇಲೆ ಹಳೆಯ ಬ್ಯಾಗ್ ಇತ್ತು ಎನ್ನಲಾಗಿದೆ. ತದನಂತರ ಸುರೇಂದ್ರ ಅವರ ಜೊತೆಗಿದ್ದ ಸತೀಶ್ ನಂಬರ್ ಗೆ ಕರೆ ಮಾಡಿದ್ದು, ಸಂಪರ್ಕ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸತೀಶ್ ಅವರ ಮೇಲೆಯೇ ಅನುಮಾನ ಉಂಟಾಗಿದ್ದು, ಪೋಲಿಸರು ಅಪರಾಧಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಮೇಲ್ನೋಟಕ್ಕೆ ಸುರೇಂದ್ರ ಬಂಟ್ವಾಳ್ ಅವರ ದೇಹದಲ್ಲಿ ಆಭರಣಗಳು ಹಾಗೆಯೇ ಇದ್ದು, ಯಾವುದೇ ದರೋಡೆ ಯತ್ನಗಳು ಕಂಡು ಬಂದಿಲ್ಲವಾದರೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಸತೀಶ್ ಕುಲಾಲ್ ಮೇಲೆ ಈ ಹಿಂದೆ ಪೋಲಿಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು ಎಂದು ಹೇಳಲಾಗಿದ್ದು, ಪೋಲಿಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.