ಭ್ರೂಣ ಹತ್ಯೆ ತಡೆಯೋದಕ್ಕೆ ಸರಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಆದರೂ ಇಂದಿಗೂ ಇದು ನಡೆಯುತ್ತಲೇ ಇದೆ. ಇದರಿಂದ ಗಂಡಿಗೆ ಹೋಲಿಸಿದರೆ ಹೆಣ್ಣಿನ ಸಂಖ್ಯಾನುಪಾತ ಕಡಿಮೆ ಇದೆ. ಭ್ರೂಣ ಹತ್ಯೆ ತಡೆಯೋದಕ್ಕೆ ಜಾಗೃತಿ ಗಾಗಿ ವ್ಯಕ್ತಿ ಓರ್ವ ಪಾದಯಾತ್ರೆನೇ ಆರಂಭಿಸಿದ್ದಾರೆ.
ಸಿಎಮ್ ಜಕ್ಕಾಲಿ ಎಂಬ ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದವರು. ಈ ವ್ಯಕ್ತಿ ಭ್ರೂಣ ಹತ್ಯೆ ತಡೆಗಾಗಿ ಜಾಗೃತಿ ಮೂಡಿಸುವುದಕ್ಕಾಗಿ ಸಾವಿರಾರು ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದು ಇದೀಗ ಬಾಗಲಕೋಟೆಗೆ ಆಗಮಿಸಿದ್ದಾರೆ. ಕನ್ಯಾಕುಮಾರಿಯಿಂದ ದೆಹಲಿವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 24 ರಿಂದ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದು, ಇದೀಗ ಬಾಗಲಕೋಟೆ ತಲುಪಿದ್ದಾರೆ. ಮುಂದೆ ಮಹಾರಾಷ್ಟ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದ ಮೂಲಕ ಜನವರಿ 5ರಂದು ದೆಹಲಿ ತಲುಪಲಿದ್ದಾರೆ. ಭ್ರೂಣ ಹತ್ಯೆ ತಡೆಯೋದಕ್ಕೆ ಡಿಜಿಟಲ್ ಕೋಡ್ ಬಳಸಿ ಎಂಬುದು ಇವರ ಆಗ್ರಹವಾಗಿದೆ. ಹೆಣ್ಣು ಭ್ರೂಣಾವಸ್ಥೆಯಲ್ಲೇ ಡಿಜಿಟಲ್ ಕೋಡ್ ಕೊಟ್ಟು, ಆಪರೇಟ್ ಮಾಡಬೇಕು. ಅಂದಾಗ ಹೆಣ್ಣಿನ ಸಂಖ್ಯೆ ಏರಿಕೆಯಾಗುತ್ತದೆ. ಈ ಹಿನ್ನೆಲೆ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇನೆ ಎಂದು ಹೇಳುತ್ತಾರೆ.
ಕನ್ಯಾಕುಮಾರಿಯಿಂದ ದೆಹಲಿವರೆಗೆ ಮೂರು ಸಾವಿರಕ್ಕೂ ಅಧಿಕ ಕಿಮೀ ಇದೆ. ದೇಶಾದ್ಯಂತ ಪಾದಯಾತ್ರೆ ಮಾರ್ಗದುದ್ದಕ್ಕೂ ಜಾಗೃತಿ ಮೂಡಿಸುತ್ತಾ ಹೊರಟಿದ್ದಾರೆ. ಹೆಣ್ಣು ಭ್ರೂಣ ಹತ್ಯೆಯಿಂದ ಲಿಂಗ ವ್ಯತ್ಯಾಸ ಆಗುತ್ತಿದೆ. ಇದರಿಂದ ರೈತ ಯುವಕರಿಗೆ ಹೆಣ್ಣು ಸಿಗದಂತಾಗಿದೆ. ಕೂಲಿ ಕಾರ್ಮಿಕರಿಗೆ ಕನ್ಯೆ ಕೊಡುತ್ತಿಲ್ಲ. ಈ ಕಾರಣ ಹಾಗೂ ಭ್ರೂಣ ಹತ್ಯೆ ತಡೆಗಾಗಿ ನನ್ನ ಪಾದಯಾತ್ರೆ ನಡೆದಿದೆ ಎಂದರು. ಇನ್ನು ಇವರ ಪಾದಯಾತ್ರೆಗೆ ಎಲ್ಲ ಕಡೆಯೂ ಜನರು ಸ್ಪಂದಿಸುತ್ತಿದ್ದು, ಸಿಎಮ್ ಜಕ್ಕಾಲಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಣ್ಣಿನ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ ಇವರ ಪಾದಯಾತ್ರೆ ಅರ್ಥಗರ್ಭಿತವಾಗಿದೆ. ಒಂದೊಳ್ಳೆ ಉದ್ದೇಶದಿಂದ ಕೈಗೊಂಡ ಇವರ ಪಾದಯಾತ್ರೆಗೆ ಸ್ಪಂದನೆಸಿಗಲಿ ಎಂಬುದು ಎಲ್ಲರ ಆಶಯವಾಗಿದೆ.