


ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಹಿಡಿದು ಥಳಿಸಿ, ಮರಕ್ಕೆ ಕಟ್ಟಿ ಹಾಕಿ ಬಳಿಕ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಇದೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಬೆಳ್ತಂಗಡಿಯ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20ರಂದು ತಡರಾತ್ರಿ 2.30ರ ಸುಮಾರಿಗೆ ಕುಳೂರು ನಿವಾಸಿಗಳಾದ ಮೊಯ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬವರು ಅನುಮಾನಾಸ್ಪದವಾಗಿ ಇವರ ಬಗ್ಗೆ ಜಯ ಪೂಜಾರಿ ಎಂಬವರ ಪತ್ನಿ ಫೋನ್ ಮಾಡಿ ತಿಳಿಸಿದಾಗ ನೇಮೋತ್ಸವ ಕಾರ್ಯಕ್ರಮದಲ್ಲಿದ್ದ ದೇವಿಪ್ರಸಾದ್ ಮತ್ತು ಇತರರು ಮನೆಯ ಬಳಿ ಬಂದಾಗ ಆರೋಪಿಗಳು ದೇವಿಪ್ರಸಾದ್ ಅವರ ಬೈಕ್ ಕಳವು ಮಾಡಿಕೊಂಡು ಹೋಗುವುದನ್ನು ಕಂಡು ಬೆನ್ನಟ್ಟಿ ತಡೆದು ನಿಲ್ಲಿಸಿದ್ದು, ಈ ವೇಳೆ ಬೈಕ್ ನೊಂದಿಗೆ ಓಡಲು ಯತ್ನಿಸಿದ ಆರೋಪದಲ್ಲಿ ಸುಮಾರು 25-30 ಜನರ ಗುಂಪು ಆರೋಪಿಗಳನ್ನು ಹಿಡಿದು ಥಳಿಸಿ, ಮರಕ್ಕೆ ಕಟ್ಟಿ ಹಾಕಿದ್ದರು.ಕೂಳೂರು ನಿವಾಸಿಗಳಾದ ಅಬ್ದುಲ್ ಸಮದ್ ಹಾಗು ಮೊಯ್ದಿನ್ ನಾಸಿರ್ ಮರೋಡಿಯಲ್ಲಿರುವ ನಾಸಿರ್ ನ ಸಂಬಂಧಿಕರ ಮನೆಗೆ ಬಂದಿದ್ದು, ತಡರಾತ್ರಿ 2.30ರ ಸುಮಾರಿಗೆ ಸಂಬಂಧಿಕರ ಮನೆ ಹುಡುಕುತ್ತಾ ಹೋಗಿದ್ದು, ನಂತರ ದಾರಿ ತಪ್ಪಿ ಪಳಾರಗೋಳಿ ಎಂಬಲ್ಲಿ ಮನೆಯ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ತೆಗೆದುಕೊಂಡು ಹೋಗುವ ವೇಳೆ ಸುಮಾರು 25 ರಿಂದ 30 ಮಂದಿಯ ತಂಡ ತಡೆದು ಹಲ್ಲೆ ಮಾಡಿ ಮರಕ್ಕೆ ಕಟ್ಟಿಹಾಕಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ.
ಈ ಬಗ್ಗೆ ಬಾಚು, ನಿತಿನ್, ನರೇಶ್ ಅಂಚನ್, ರತ್ನಾಕರ, ಸಾತ್ವಿಕ್, ದೇವಿಪ್ರಸಾದ್, ಸುಧೀರ್, ಚಂದಪ್ಪ ಹಾಗು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








