ಬೆಂಗಳೂರು: ನಗರದ ತಿಗಳರಪಾಳ್ಯದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ತಿಗಳರ ಪಾಳ್ಯದ ಮನೆಯೊಂದರಲ್ಲಿ ಈ ವಿಷಾದಕರ ಘಟನೆ ನಡೆದಿದೆ.
ಸ್ಥಳೀಯ ಪತ್ರಿಕೆಯೊಂದರ ಸಂಪಾದಕರ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡವರು. ಅವರ ಕುಟುಂಬದ ಭಾರತಿ (50), ಸಿಂಚನ(33), ಸಿಂಧುರಾಣಿ (30), ಮಧು ಸಾಗರ(27) ಆತ್ಮಹತ್ಯೆ ಮಾಡಿಕೊಂಡವರು. ಜತೆಗೆ ಒಂಬತ್ತು ತಿಂಗಳ ಮಗು ಹಸಿವಿನಿಂದ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.
ಐದು ದಿನದ ಹಿಂದೆಯೆ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಮನೆಯಲ್ಲಿ ಒಟ್ಟು 6 ಮಂದಿ ಇದ್ದರು. ಕಳೆದ ಐದು ದಿನಗಳಿಂದ 3 ವರ್ಷದ ಒಂದು ಮಗು ಮಾತ್ರ ಬದುಕಿತ್ತು. ಆಹಾರವಿಲ್ಲದೆ ನಿತ್ರಾಣವಾಗಿತ್ತು. ಸದ್ಯ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೌಟುಂಬಿಕ ಕಲಹದಿಂದ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮನೆಯಲ್ಲಿ ಪ್ರತಿದಿನ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ. ಶಂಕರ್ ಪತ್ನಿ ಜತೆ ಓರ್ವ ಮಗ, ಇಬ್ಬರು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.