ಬೆಂಗಳೂರು: ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳ ನಡೆಯಲಿದೆ.
ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಕಂಬಳಕ್ಕೆ ಭರದಿಂದ ಸಿದ್ದತೆಗಳು ನಡೆಯುತ್ತಿದ್ದು, “ಕರೆ ಪೂಜೆ” ಕಾರ್ಯಕ್ರಮವು ನಾಳೆ(ಅ.11)ರಂದು ಬೆಳಿಗ್ಗೆ 9.30ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿದೆ.
ಕಂಬಳ ವೀಕ್ಷಿಸಲು ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದ್ದು, 145 ಮೀ ಉದ್ದದ ಕಂಬಳದ ಕರೆ ನಿರ್ಮಿಸಲಾಗುತ್ತಿದೆ. ಕಂಬಳಕ್ಕೆ ಆಗಮಿಸುವ ವೀಕ್ಷಕರ ಅನುಕೂಲಕ್ಕೆ 6 ಸಾವಿರ ಕಾರು ಪಾರ್ಕಿಂಗ್, ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ನ.23ರಂದು ಬೆಳಗ್ಗೆ 8.30ಕ್ಕೆ ಮಂಗಳೂರಿನ ನಿಗದಿತ ಸ್ಥಳದಿಂದ 125ಕ್ಕೂ ಅಧಿಕ ಜತೆ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದೆ.
ಕಂಬಳ ಕೋಣಗಳಿಗೆ ಹಾಸನದಲ್ಲಿ ಅಲ್ಲಿನ ಸಂಘಟನೆಗಳು ಭವ್ಯ ಸ್ವಾಗತ ನೀಡಲಿದ್ದು, ಸುಮಾರು 2ಗಂಟೆಗಳ ಕಾಲ ಅಲ್ಲೇ ತಂಗಲು ವ್ಯವಸ್ಥೆ ಮಾಡಲಾಗುವುದು.ಕೋಣಗಳ ಯಜಮಾನರ ಆಗ್ರಹದಂತೆ ಕೋಣಗಳ ಕ್ಷಮತೆ, ಆರೋಗ್ಯ ಕಾಪಾಡುವ ದೃಷ್ಟಿಯಿಂದ 6ಟ್ಯಾಂಕರ್ ನೀರನ್ನು ದ.ಕ. ಜಿಲ್ಲೆಯಿಂದಲೇ ಕೊಂಡೊಯ್ಯಲಾಗುವುದು. ಕೋಣಗಳ ಜತೆ ಜಿಲ್ಲೆಯ ಪರಿಣಿತ ಪಶು ವೈದ್ಯ ಅಧಿಕಾರಿಗಳು, ಆಹಾರಗಳನ್ನು ಕೊಂಡೊಯ್ಯಲಾಗುವುದು.