ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಾಜ್ಯ ಹೈಕೋರ್ಟ್ ಕೆಪಿಎಸ್ಸಿ ರದ್ದತಿಗೆ ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದೆ.
ಕೆಪಿಎಸ್ಸಿಯನ್ನು ರದ್ದುಪಡಿಸಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಮಾದರಿಯಲ್ಲಿ ಹೊಸ ಪದ್ದತಿ ಪರಿಚಯಿಸುವುದು ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪಾರದರ್ಶಕತೆ ಕಾಯ್ದುಕೊಳ್ಳದೆ ಹತ್ತಾರು ಅಕ್ರಮಗಳನ್ನು ಎಸಗುತ್ತಿರುವ ಕೆಪಿಎಸ್ಸಿ ಪತ್ರಾಂಕಿತ ಹುದ್ದೆಗಳ ನೇಮಕಾತಿಯಲ್ಲೂ ಜ್ಯೇಷ್ಠತೆ ಕಾಯ್ದುಕೊಂಡಿಲ್ಲ ಎಂದು ಹೈಕೋರ್ಟ್ ಹೇಳಿದೆ.
1998ನೇ ಸಾಲಿನ ಕೆಎಎಸ್ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೆಪಿಎಸ್ಸಿಯಲ್ಲಿ ನಡೆದಿರುವ ಅಕ್ರಮಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಮುಂದಾದರೂ ನೇಮಕ ವ್ಯವಸ್ಥೆ ಸರಿಯಾಗ ಬೇಕಾದರೆ ಕೆಪಿಎಸ್ಸಿಯನ್ನು ರದ್ದುಪಡಿಸುವುದೇ ಉತ್ತಮ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಯುಪಿಎಸ್ಸಿ ಮಾದರಿ ವ್ಯವಸ್ಥೆ ಅನುಷ್ಠಾನಗೊಳಿಸುವುದು ಉತ್ತಮ ಮಾರ್ಗ ಎಂದು ಹೈಕೋರ್ಟ್ ಹೇಳಿದೆ.