ಬೆಂಗಳೂರು(ಅ.30): ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡೊ ಮುನ್ನಾ ಹುಷಾರಾಗಿರಿ. ಯಾಕಂದ್ರೆ ವ್ಯಕ್ತಿಯೊಬ್ಬ ಮದುವೆ ಹೆಸರಲ್ಲಿ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ವಂಚನೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.
ಟೆಕ್ಕಿ ಯುವತಿ ಮದುವೆಗೆ ವರನ ಅನ್ವೇಷಣೆ ಮಾಡ್ತಿದ್ದರು. ಮ್ಯಾಟ್ರಿಮೋನಿ ವೆಬ್ಸೈಟ್ವೊಂದ್ರಲ್ಲಿ ಯುವತಿಗೆ ಕಬೀರ್ ಆನಂದ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ನಂತರ ಪರಸ್ಪರ ನಂಬರ್ ಎಕ್ಸ್ ಚೇಂಜ್ ಆಗಿ ಇಬ್ಬರ ನಡುವೆ ಮಾತುಕತೆ ನಡೆದಿತ್ತು. ಆರೋಪಿ ಕಬೀರ್ ನಾನು ಲಂಡನ್ನಲ್ಲಿ ಇದ್ದೀನಿ. ಬೆಂಗಳೂರಿಗೆ ಬರ್ತಿನಿ ಅಂತ ಯುವತಿಗೆ ಸುಳ್ಳು ಹೇಳಿದ್ದ. ಕಳೆದ ಅಕ್ಟೋಬರ್ 18ರಂದು ಭಾರತಕ್ಕೆ ಬರುವುದಾಗಿ ತಿಳಿಸಿದ್ದ.
ಅಕ್ಟೋಬರ್ 19ರಂದು ಟೆಕ್ಕಿ ಯುವತಿಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ ನಾನು ದೆಹಲಿಯ ಕಸ್ಟಮ್ಸ್ ಅಧಿಕಾರಿ. ಕಬೀರ್ ಆನಂದ್ ಲಂಡನ್ನಿಂದ ದೆಹಲಿಗೆ ಬಂದಿದ್ದಾರೆ. ಅಲ್ಲಿಂದ 1.70 ಲಕ್ಷ ಯುರೋ ಕರೆನ್ಸಿ ತಂದಿದ್ದಾರೆ. ಇದನ್ನು ರೂಪಾಯಿಗೆ ಪರಿವರ್ತಿಸಲು ಹಣ ಟ್ರಾನ್ಸ್ಫರ್ ಮಾಡಿ ಅಂತ ಹೇಳಿದ್ದಳು. ಹೀಗೆ ಯುವತಿಯಿಂದ 3.07 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ನಂತರ ಅಪರಿಚಿತ ಮಹಿಳೆಯ ಮೊಬೈಲ್ ಹಾಗೂ ವಂಚಕ ಕಬೀರ್ ಆನಂದ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೋಸ ಹೋದ ಯುವತಿ ಈ ಕುರಿತು ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.