ಬೆಂಗಳೂರು: ಜ್ಯೋತಿಷಿಯೊಬ್ಬನ ಮಾತನ್ನು ಕೇಳಿ, ಪರಿಪಾಲನೆ ಮಾಡುವ ಮೊದಲು ಸ್ವಲ್ಪ ಎಚ್ಚರವಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
‘ನಿನಗೆ ಪಿತೃದೋಷವಿದೆ ಎಂದು ಬಾಲಕನೊಬ್ಬನಿಗೆ ಜ್ಯೋತಿಷಿಯೊಬ್ಬ ಭವಿಷ್ಯ ನುಡಿದಿದ್ದ, ನಿನ್ನ ತಂದೆ-ತಾಯಿ ಇರುವವರೆಗೂ ನಿನಗೆ ಒಳ್ಳೆಯ ಕಾಲವಿಲ್ಲ ಎಂದು ಉಪದೇಶ ಮಾಡಿದ್ದ ಡೋಂಗಿ ಜ್ಯೋತಿಷಿ ಮಾತು ಕೇಳಿದ 14 ವರ್ಷದ ಬಾಲಕ ಎಂತಹ ಘೋರ ಕೃತ್ಯ ಮಾಡಿದ್ದಾನೆ ನೋಡಿ.
ಪೀಣ್ಯದ ಕರಿಹೋಬನಹಳ್ಳಿಯ ಕೆಎಎಸ್ ಅಧಿಕಾರಿ ಕಚೇರಿಯಲ್ಲಿನ ಸೆಕ್ಯುರಿಟಿ ದಂಪತಿಯ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗನೆ ತನ್ನ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜ್ಯೋತಿಷಿಯ ಮಾತು ಕೇಳಿದ ಯುವಕ ತನಗೆ ಒಳ್ಳೆಯ ಕಾಲ ಬರಬೇಕು ಎಂದರೆ ತಂದೆ-ತಾಯಿಯನ್ನು ಮುಗಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಇದೇ ಕಾರಣಕ್ಕೆ ಅಪ್ಪ- ಅಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ, ಭೀಕರವಾಗಿ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಮಗನ ಮೇಲೆಯೇ ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಜ್ಯೋತಿಷಿಯನ್ನು ಬಂಧಿಸಿದ ಪೀಣ್ಯ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.