ಬೆಂಗಳೂರು: ಅತ್ಯಾಚಾರ ದೂರಿನ ಕಾರಣ ಚಾಮರಾಜಪೇಟೆ ಪೊಲೀಸ್ ಠಾಣೆ ಪಿಎಸ್ಐ ವಿಶ್ವನಾಥ್ ಬಿರಾದರ್ ಅಮಾನತುಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ನೀಡಿದ ವರದಿ ಮೇರೆಗೆ ಪೊಲೀಸ್ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.
ಲ್ಯಾಪ್ಟಾಪ್ ಕಳುವಾಗಿದೆ. ಪತ್ತೆ ಹಚ್ಚಿ ಕೊಡಿ ಎಂದು ದೂರು ನೀಡುವುದಕ್ಕಾಗಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಬಂದಿದ್ದಳು ಯುವತಿ. ಪಿಎಸ್ಐ ವಿಶ್ವನಾಥ ಬಿರಾದಾರ್ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮಕ್ಕೆ ತಿರುಗಿ ವಿವಾಹದ ಹಂತಕ್ಕೆ ಬಂದಾಗ ಹೀಗಾಗಿರಬೇಕೆಂಬ ಗುಮಾನಿಯೂ ಇದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನವೆಂಬರ್ 11ರಂದು ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಯುವತಿ ಮತ್ತು ಬಿರಾದಾರ್ ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ.
ಯುವತಿಯ ದೂರಿನ ಪ್ರಕಾರ ನವೆಂಬರ್ 9ರಂದು ಯುವತಿಯನ್ನು ಬಿರಾದಾರ್ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು.ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ಯಲಾಗಿತ್ತು. ಲಾಡ್ಜ್ನಲ್ಲಿ ತಂಗಿದ್ದ ವೇಳೆ ಅತ್ಯಾಚಾರವೆಸಗಿ ಮದುವೆ ಆಗದೇ ಅಲ್ಲಿಂದ ವಾಪಸಾಗಿದ್ದಾರೆ ಎಂಬ ಆರೋಪವಿದೆ.
ಬಿರಾದಾರ್ ದೂರಿನ ಪ್ರಕಾರ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಮದುವೆಗೆ ಒಪ್ಪದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಒಡ್ಡಿದ್ದಲ್ಲದೆ ಹತ್ತು ಲಕ್ಷ ರೂಪಾಯಿ ಕೊಡಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದಳು. ಒಂದೊಮ್ಮೆ ಹಣ ನೀಡದೇ ಹೋದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ್ದಾಗಿ ಆರೋಪವಿದೆ.