


ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹತ್ಯೆ ಮುಂದುವರಿದಿದೆ. ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ವ್ಯಕ್ತಿಯನ್ನ ಗ್ಯಾರೇಜ್ ಒಳಗೇ ಸುಟ್ಟುಹಾಕಲಾಗಿದೆ. ಆದ್ರೆ ಇದು ಪೂರ್ವನಿಯೋಜಿತ ಕೃತ್ಯ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಚಂಚಲ್ ಚಂದ್ರ ಭೌಮಿಕ್ ಸಜೀವ ದಹನವಾದ ವ್ಯಕ್ತಿ. ನರಸಿಂಗ್ಡಿ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಮಸೀದಿ ಮಾರುಕಟ್ಟೆ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಭೌಮಿಕ್ ಮೂಲತಃ ಕುಮಿಲ್ಲಾ ಜಿಲ್ಲೆಯ ಲಕ್ಷ್ಮಿಪುರ ಗ್ರಾಮದವರು, ಕೆಲಸದ ನಿಮಿತ್ತ ನರಸಿಂಗ್ಡಿ ಜಿಲ್ಲೆಯಲ್ಲಿ ವಾಸವಿದ್ದ, ಕುಟುಂಬಕ್ಕೆ ಈತನೊಬ್ಬನೇ ಜೀವನಾಧಾರವಾಗಿದ್ದ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ತಡರಾತ್ರಿ ಚಂಚಲ್ ಗ್ಯಾರೇಜ್ ಒಳಗೆ ಮಲಗಿದ್ದಾಗ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಗ್ಯಾರೇಜ್ನ ಶಟರ್ಗೆ ಹೊರಗಿನಿಂದಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಬಹುಬೇಗನೆ ವ್ಯಾಪಿಸಿದ್ದರಿಂದ ಚಂಚಲ್ ಅಂಗಡಿಯೊಳಗೇ ಸಜೀವ ದಹನವಾಗಿದ್ದಾರೆ. ಘಟನೆ ಬಳಿಕ ದಾಳಿಕೋರರು ಗ್ಯಾರೇಜ್ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದೃಶ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ಯಾರೇಜ್ಗೆ ಬೆಂಕಿ ಬಿದ್ದ ಕೆಲವೇ ಸಮಯದಲ್ಲಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನರಸಿಂಗಡಿ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ತಲುಪಿ ಸುಮಾರು 1 ಗಂಟೆಯ ಪ್ರಯತ್ನದ ನಂತರ ಬೆಂಕಿಯನ್ನ ನಿಯಂತ್ರಣಕ್ಕೆ ತಂದಿತು. ಬಳಿಕ ಸಜೀವ ದಹನವಾಗಿದ್ದ ಚಂಚಲ್ ಅವರ ಸುಟ್ಟ ದೇಹವನ್ನ ಹೊರ ತೆಗೆಯಲಾಯಿತು.ಇನ್ನೂ ಘಟನೆ ಪೂರ್ವ ನಿಯೋಜಿತ ಕೃತ್ಯ ಎಂದು ಕುಟುಂಸ್ಥರು ಆರೋಪಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಚಂಚಲ್ ಹತ್ಯೆಗೆ ನಿಖರ ಕಾರಣ ಪತ್ತೆಹಚ್ಚಲು ಮುಂದಾಗಿದ್ದಾರೆ.








