




ಬೆಂಗಳೂರು: ಮದ್ಯಪಾನ ಮಾಡಿ ದಿನನಿತ್ಯ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಅಸ್ಸಾಂ ಮೂಲದ ರಾಜೀವ್ ರಜಪೂತ್ (28) ಎಂಬ ವ್ಯಕ್ತಿ ಮೃತಪಟ್ಟವನಾಗಿದ್ದು, ಎಂಟು ವರ್ಷಗಳ ಹಿಂದೆ ರುಬಿನಾ ಕೌರ್ ಅವರನ್ನು ವಿವಾಹವಾಗಿದ್ದ. ದಂಪತಿಗೆ ಒಬ್ಬ ಪುತ್ರನಿದ್ದು, ವರ್ತೂರಿನ ಮುನೇಕೊಳಲು ಶಿರಡಿ ಸಾಯಿ ಬಾಬಾ ದೇವಸ್ಥಾನದ ಸಮೀಪ ವಾಸವಾಗಿದ್ದರು.
ರಾಜೀವ್ ಕೆಲಸಕ್ಕೆ ಹೋಗದೇ ಮದ್ಯಪಾನಕ್ಕೆ ಅಡ್ಡಿಯಾಗಿದ್ದನು. ಕುಟುಂಬ ನಿರ್ವಹಣೆಗಾಗಿ ಪತ್ನಿ ಕೆಲಸಕ್ಕೆ ಹೋಗಲು ಇಚ್ಛೆ ವ್ಯಕ್ತಪಡಿಸಿದರೂ ಪತಿ ಅವಕಾಶ ನೀಡದೇ ಕಿರುಕುಳ ನೀಡುತ್ತಿದ್ದನೆಂದು ತಿಳಿದುಬಂದಿದೆ. ಬುಧವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದ ಆತ ಪತ್ನಿಯೊಂದಿಗೆ ಗಲಾಟೆ ನಡೆಸಿದ್ದಾನೆ.
ಗುರುವಾರ ಬೆಳಗಿನ ಜಾವವೂ ಜಗಳ ತೀವ್ರಗೊಂಡಿದ್ದು, ಪತಿಯ ವರ್ತನೆಯಿಂದ ಬೇಸತ್ತ ರುಬಿನಾ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ರಾಜೀವ್ನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಹಲವು ಬಾರಿ ಇರಿದಿದ್ದಾಳೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ರಾಜೀವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೂಗಾಟ ಕೇಳಿದ ಸ್ಥಳೀಯರು ಮನೆ ಬಳಿ ಸೇರಿದ್ದು, ರಕ್ತದ ಮಡುವಿನಲ್ಲಿ ವ್ಯಕ್ತಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪತ್ನಿ ರುಬಿನಾ ಕೌರ್ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ








