ಬೆಂಗಳೂರು: ಬಹು ದಿನಗಳಿಂದ ಚರ್ಚೆಯಲ್ಲಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.ಜ.13ರಂದು ಮಧ್ಯಾಹ್ನ 7 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೂ ಚಿಂತನೆ ನಡೆದಿದ್ದು ಬಿ ಎಸ್ ವೈ ಅವರನ್ನು ಬದಲಾಯಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳದುಬಂದಿದೆ.ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಯಡಿಯೂರಪ್ಪ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. 7 ಸಚಿವರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದೂ ತಿಳಿಸಿದ್ದಾರೆ. ಬಹುತೇಕ ನಾವು ಅಂದುಕೊಂಡಂತೆಯೇ ಎಲ್ಲವೂ ಆಗಿದೆ. ಒಂದೆರಡು ವ್ಯತ್ಯಾಸವಿದೆ ಎಂದು ಬಿ ಎಸ್ ವೈ ಹೇಳಿದರು.
ಸಂಪುಟ ವಿಸ್ತರಣೆಗೆ ಹೈಕಮಾಂಡ್’ನಿಂದ ಅನುಮತಿ ಸಿಕ್ಕಿದ್ದರೂ ಯಾರು ಯಾರು ಸಚಿವರಾಗಬಹುದು ಎಂಬುದರ ಬಗ್ಗೆ ಬಿ ಎಸ್ ವೈ ಏನನ್ನೂ ಹೇಳಿಲ್ಲ. ಮುನಿರತ್ನ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸುನಿಲ್ ಕುಮಾರ್, ಎಂ.ಟಿ.ಬಿ. ನಾಗರಾಜ್, ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಹಾಲಪ್ಪ ಆಚಾರ್ ಅವರ ಹೆಸರು ಸಂಫುಟ ಸೇರುವವರ ಲಿಸ್ಟ್ ನಲ್ಲಿ ಪ್ರಮುಖವಾಗಿದೆ. ಬಿಎಸ್ವೈ ಅವರ ಪುತ್ರ ವಿಜಯೇಂದ್ರ ಅವರು ಇನ್ನೂ ದೆಹಲಿಯಲ್ಲೇ ಇರುವುದು ಹಲವು ಅನುಮಾನ, ಕುತೂಹಲಗಳಿಗೆ ಕಾರಣವಾಗಿದೆ.