Thursday, July 23, 2026
spot_imgspot_img
spot_imgspot_img

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟೀಕರಣ

- Advertisement -
- Advertisement -

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.)ದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಪ್ರಧಾನ ಕಛೇರಿಯಲ್ಲಿ ತುರ್ತು ಪದಾಧಿಕಾರಿಗಳ ಸಭೆ ಜ.12ರ ಸೋಮವಾರದಂದು ನಡೆಯಿತು. ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಮತ್ತು ಲೆಕ್ಕಪತ್ರಗಳ ನಿರ್ವಹಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದರ ಬಗ್ಗೆ ಖಂಡಿಸಲಾಯಿತು.


ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿಯವರು ಮಾತನಾಡಿ ನಮ್ಮ ಸಂಸ್ಥೆಯು ಜಗತ್ತಿನ ಎಲ್ಲಾ ಬಂಟರ ಸಂಘಗಳ ಒಕ್ಕೂಟವಾಗಿದ್ದು, ಈ ಹಿಂದಿನಿಂದಲೂ ಸಮಾಜಕ್ಕೆ ಸಮುದಾಯಕ್ಕೆ ಸಹಾಯವಾಗುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದು, ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ಆರೋಗ್ಯಕ್ಕೆ ಸಹಾಯಹಸ್ತ, ವಿದ್ಯಾಭ್ಯಾಸಕ್ಕೆ ಸಹಾಯ, ಮದುವೆ ಶುಭಕಾರ್ಯಗಳಿಗೆ ಆರ್ಥಿಕ ಸಹಾಯ ನೀಡುತ್ತಾ ಹಲವರ ಮೆಚ್ಚುಗೆಯನ್ನು ಪಡೆದಿರುತ್ತದೆ.

ಅಂತಹ ಸಂಸ್ಥೆಯ ಬಗ್ಗೆ ಹಾಗೂ ಪದಾಧಿಕಾರಿಗಳ ಬಗ್ಗೆ ಹಾಗೂ ಚುನಾವಣಾ ಪ್ರಕ್ರಿಯೆ ಬಗ್ಗೆ ಮತ್ತು ಲೆಕ್ಕಪತ್ರಗಳ ನಿರ್ವಹಣೆಯ ಬಗ್ಗೆ ಸಹ ಸಮಾಜಕ್ಕೆ ತಪ್ಪು ಮಾಹಿತಿಯನ್ನು ಹರಡುತ್ತಿರುವವರಿಗೆ ಸ್ಪಷ್ಟೀಕರಣ ನೀಡಿದರು. ಬಳಿಕ ಮಾತನಾಡಿದ ಒಕ್ಕೂಟದ ಲೆಕ್ಕಿಗರಾದ ಸಿ.ಎ.ದಯಶರಣ್ ಶೆಟ್ಟಿಯವರು ಸಂಸ್ಥೆಯು ಪ್ರತಿ ವರ್ಷ ಲೆಕ್ಕಪತ್ರಗಳನ್ನು ಸಮಯಾನುಸಾರ ಲೆಕ್ಕ ಪರಿಶೋಧನೆ ಮಾಡಿಸುತ್ತಿದ್ದು ಸರಿಯಾದ ರೀತಿಯಲ್ಲಿ ಕಾರ್ಯ ಪ್ರವೃತ್ತಿ ನಡೆಸುತ್ತಿದೆ, ಆದಾಯ ತೆರಿಗೆ ನೋಂದಾವಣೆ ಸಹ ಆಗಿದ್ದು ಎಲ್ಲಾ ರೀತಿಯಲ್ಲೂ ಸರಿ ಇರುವ ಕಾರಣ ಸಂಸ್ಥೆಯು 80G ಮತ್ತು 12A ನಂತಹ ದಾಖಲೆಯನ್ನು ಹೊಂದಿರುವುದಾಗಿ ಆ ದಾಖಲೆಗಳನ್ನು ತೋರಿಸಿ ಸ್ಪಷ್ಟವಾಗಿ ತಿಳಿಸಿದರು.


ಇತ್ತೀಚೆಗೆ ನವೆಂಬರ್ ತಿಂಗಳಿನಲ್ಲಿ ನಡೆದ ಪದಾಧಿಕಾರಿಗಳ ಚುನಾವಣೆಯನ್ನು ಸುಸೂತ್ರವಾಗಿ ನಡೆಸಿ ಕೊಟ್ಟ ವಕೀಲರಾದ ಕೆ. ಪೃಥ್ವಿರಾಜ್ ರೈ ಯವರು ಮಾತನಾಡಿ ಮುಂದಿನ 3 ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆಗಾಗಿ ನಡೆಸಲಾದ ಚುನಾವಣಾ ಪ್ರಕ್ರಿಯೆ ಸಂಸ್ಥೆಯ ಬೈಲಾ ಉಪನಿಬಂಧನೆಯ ನಿಯಮದಂತೆ ನಡೆಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಯಪಡಿಸಿದರು.


ಸಭೆಯಲ್ಲಿ ಒಕ್ಕೂಟದ ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ, ಸಂಚಾಲಕರಾದ ಕೊಲ್ಲಾಡಿ ಬಾಲಕೃಷ್ಣ ರೈ, ಮಾಜಿ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -

Related news

error: Content is protected !!