





ಪುತ್ತೂರು: ಪುತ್ತೂರು ಹಾಗೂ ಸುತ್ತಮುತ್ತಲಿನ ಜನರ ಬಹುದಿನದ ಬೇಡಿಕೆಯಾಗಿದ್ದ ವಂದೇ ಭಾರತ್ ರೈಲು ನಿಲುಗಡೆಗೆ ಕೊನೆಗೂ ರೈಲ್ವೆ ಇಲಾಖೆಯಿಂದ ಪೂರಕ ಸ್ಪಂದನೆ ದೊರೆತಿದೆ.
ಪುತ್ತೂರು ಪ್ರಮುಖ ವಾಣಿಜ್ಯ, ಶೈಕ್ಷಣಿಕ ಮತ್ತು ಆಡಳಿತ ಕೇಂದ್ರವಾಗಿದ್ದು, ಪ್ರತಿನಿತ್ಯ ಉದ್ಯೋಗ, ಶಿಕ್ಷಣ, ವ್ಯಾಪಾರ ಮತ್ತು ಆರೋಗ್ಯ ಸೇವೆಗಾಗಿ ಬೆಂಗಳೂರು-ಮಂಗಳೂರು ನಡುವೆ ಸಾವಿರಾರು ಜನರು ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲಿಗೆ ಪುತ್ತೂರಿನಲ್ಲಿ ನಿಲುಗಡೆ ನೀಡುವಂತೆ ಹಿರಿಯ ವಕೀಲ ಡಾ. ಅರುಣ್ ಶ್ಯಾಮ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದರು.
ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರದ ವೇಳೆ ನಿಲುಗಡೆ ನೀಡದ ನಿಲ್ದಾಣಗಳಿಗೆ ನಿತ್ಯ ಸಂಚಾರದಲ್ಲಿ ನಿಲುಗಡೆ ಸಿಗುವುದು ಕಷ್ಟ. ಅದೇ ರೀತಿ ಪುತ್ತೂರಿಗೂ ನಿಲುಗಡೆ ಅವಕಾಶ ಇರಲಿಲ್ಲ. ಆದರೆ ಡಾ. ಅರುಣ್ ಶ್ಯಾಮ್ ಅವರು ರೈಲ್ವೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿ, ಪ್ರಾಯೋಗಿಕ ಸಂಚಾರದ ವೇಳೆಯೇ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಿದ್ದರು.
ಇದೀಗ ಈ ಮನವಿಗೆ ಪೂರಕವಾಗಿ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಂದೇ ಭಾರತ್ ರೈಲಿನ ನಿಲುಗಡೆಗೆ ಸಂಬಂಧಿಸಿದ ಸಮಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಕಾರ್ಯಾಚರಣೆಯ ಸಮಯ ಹಾಗೂ ಮಾರ್ಗದ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿರುವುದು ಪುತ್ತೂರಿನ ಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಇದೀಗ ಕಬಕ–ಪುತ್ತೂರು ನಿಲುಗಡೆಗೆ ರೈಲ್ವೆ ಇಲಾಖೆಯಿಂದ ಪೂರಕ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ, ಅರುಣ್ ಶ್ಯಾಮ್ ಅವರ ಪ್ರಯತ್ನಕ್ಕೆ ಪುತ್ತೂರಿನ ಜನತೆ ಧನ್ಯವಾದ ವ್ಯಕ್ತಪಡಿಸಿದ್ದಾರೆ.








