ಬಂಟ್ವಾಳ: ಮನೆಮಂದಿಯೆಲ್ಲಾ ನಾಟಕ ಪ್ರದರ್ಶನ ನೋಡಲು ಹೋಗಿದ್ದ ಸಮಯದಲ್ಲಿ ಬಾಗಿಲು ಮುರಿದು ನಗದು ಕಳ್ಳತನ ಮಾಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿನ ನಾಲ್ಕು ಮನೆಗಳಿಗೆ ಕಳ್ಳರು ನುಗ್ಗಿದ್ದು, ಒಂದು ಮನೆಯ ಕಪಾಟಿನಲ್ಲಿರಿಸಿದ್ದ 8 ಸಾವಿರ ನಗದು ದೋಚಿದ್ದಾರೆ. ಮಜಿ ನಿವಾಸಿ ಮನೋಜ್ ಕೊಟ್ಟಾರಿ ಎಂಬವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 8 ಸಾವಿರ ರೂ ನಗದನ್ನು ಕಳ್ಳರು ಕಳವು ಮಾಡಿದ್ದಾರೆ.
ಉಳಿದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಸಂಪೂರ್ಣ ಮನೆಯನ್ನು ಜಾಲಾಡಿದ್ದು, ಯಾವುದೇ ವಸ್ತುಗಳು ಕೈಗೆ ಸಿಗದೆ ಬರಿ ಕೈಯಲ್ಲಿ ವಾಪಾಸು ಆಗಿದ್ದಾರೆ.
ತುಂಬೆ ಸಮೀಪದ ಮಜಿ ಎಂಬಲ್ಲಿ “ಶಿವಧೂತೆ ಗುಳಿಗೆ” ಎಂಬ ನಾಟಕ ಪ್ರದರ್ಶನ ನಡೆಯುತ್ತಿರುವ ಕಾರಣ ಈ ಪರಿಸರದ ಬಹುತೇಕ ಮನೆಯವರು ನಾಟಕ ವೀಕ್ಷಿಸಲು ಮನೆಗೆ ಬೀಗ ಹಾಕಿ ತೆರಳಿದ್ದರು. ಆದರೆ ನಾಟಕ ವೀಕ್ಷಿಸಿ ವಾಪಾಸು ಮನೆಗೆ ತೆರಳಿ ನೋಡಿದಾಗ ಮನೆಯ ಬೀಗ ಮುರಿದು ಮನೆಗೆ ಅಕ್ರಮ ಪ್ರವೇಶ ಮಾಡಿರುವುದು ಗಮನಕ್ಕೆ ಬಂದಿದೆ.
ಸ್ಥಳಕ್ಕೆ ಬಂಟ್ವಾಳ ಎಸ್.ಐ ಪ್ರಸನ್ನ, ಅಪರಾಧ ವಿಭಾಗದ ಎಸ್.ಐ.ಸಂಜೀವ, ಎಚ್.ಸಿ.ಸುರೇಶ್, ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.