ಬಂಟ್ವಾಳ: ಕೆಎಸ್ಆರ್ಟಿಸಿ ವಿನ್ಯಾಸಗೊಳಿಸಿದ ‘ಸಾರಿಗೆ ಸುರಕ್ಷಾ-ಐಸಿಯು ಬಸ್’ ಗ್ರಾಮೀಣ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಇಲ್ಲಿನ ಬಿ.ಸಿ.ರೋಡು ಕೆಎಸ್ಆರ್ಟಿಸಿ ಡಿಪೊಗೆ ಬಂದಿದೆ.
ಇದೇ ಮೊದಲ ಬಾರಿಗೆ ಕೆಎಸ್ಆರ್ಟಿಸಿ ವಿಭಾಗಗಳ ವ್ಯಾಪ್ತಿಯಲ್ಲಿ ಈ ಬಸ್ ಬಂಟ್ವಾಳಕ್ಕೆ ಬಂದಿದೆ. ಕಳೆದ ತಿಂಗಳು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ನ ಬಗ್ಗೆ ಬೇಡಿಕೆಯಿಟ್ಟಿದ್ದರು.
ಈ ಬಸ್ಗೆ ಆಂಬುಲೆನ್ಸ್ ಮಾದರಿಯ ಹಾಗೆ ಸೈರನ್ ಅಳವಡಿಸಲಾಗಿದ್ದು, ಅದರ ಒಳಗಡೆ ಐದು ಹಾಸಿಗೆಯಿದ್ದು, ಜೊತೆಗೆ ಆಮ್ಲಜನಕದ ವ್ಯವಸ್ಥೆಯೂ ಇದೆ. ರೋಗಿಗಳ ರಕ್ತದೊತ್ತಡ, ಆಮ್ಲಜನಕ ಪ್ರಮಾಣ, ಇಸಿಜಿ, ತಾಪಮಾನವನ್ನು ಮಾನಿಟರ್ ಮಾಡುವ ವ್ಯವಸ್ಥೆ ಇದ್ದು, ವೆಂಟಿಲೇಟರ್ ಅಳವಡಿಸುವ ಸೌಲಭ್ಯ, ತುರ್ತು ಔಷಧ ಸಹಿತ ಜನರೇಟರ್ ವ್ಯವಸ್ಥೆ ಇರುತ್ತದೆ. ಜು.13ರಂದು ಪೊಳಲಿ ಕ್ಷೇತ್ರದಲ್ಲಿ ಶಾಸಕ ರಾಜೇಶ್ ನಾಯ್ಕ್ ಬಸ್ ಸಂಚಾರಕ್ಕೆ ಚಾಲನೆ ನೀಡಲಿದ್ದು, ಈ ಬಸ್ ಎರಡು ತಿಂಗಳಿಗೊಮ್ಮೆ ಗ್ರಾಮಗಳಿಗೆ ತೆರಳಿ ಸಂಚಾರಿ ಆಸ್ಪತ್ರೆ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.