ಬಂಟ್ವಾಳ: ಕಳೆದ ವರ್ಷ ಲಾಕ್ಡೌನ್ ಸಂದರ್ಭ ಮನೆಯಲ್ಲೇ ಏನಾದರೊಂದು ಸ್ವಾದ್ಯೋಗ ಮಾಡಬೇಕೆಂಬ ಆಲೋಚನೆಯಲ್ಲಿದ್ದ ದಂಪತಿ ಇದೀಗ ಗೆರಟೆಯಲ್ಲಿ ಹಲವು ರೀತಿಯ ಕಲಾಕೃತಿಗಳನ್ನು ಮಾಡಿ ಯಶಸ್ಸನ್ನು ಸಾಧಿಸಿದ್ದಾರೆ. ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಭಾರತದ ಕಲ್ಪನೆಯಂತೆ ಈ ದಂಪತಿ ಸ್ವಾದ್ಯೋಗದಲ್ಲಿ ತೊಡಗಿಕೊಂಡಿದೆ.
ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡ್-ಕಲ್ಪನೆ ನಿವಾಸಿ ಸಚ್ಚೀಂದ್ರ ಮೇಸ್ತ್ರಿ ಹಾಗೂ ಜಯಲಕ್ಷ್ಮೀ ದಂಪತಿ ಗೆರಟೆಯ ಮೂಲಕ ಕಲಾಕೃತಿಗಳನ್ನು ರಚಿಸಿ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಸಚ್ಚೀಂದ್ರ ಲಾಕ್ಡೌನ್ ವೇಳೆ ಮನೆಯಲ್ಲೇ ಕೂತಿದ್ದರು.ಜೀವನ ನಿರ್ವಹಣೆಗಾಗಿ ಯಾವುದಾದರೊಂದು ಉದ್ಯೋಗ ಅನಿವಾರ್ಯವಾಗಿತ್ತು. ಹೀಗಾಗಿ ಇಟ್ಟಿಗೆ ಮಾಡುವ ವೃತ್ತಿಯನ್ನು ಆರಂಭಿಸಿದರು. ಇಂತಹ ಉದ್ಯಮಗಳು ದೊಡ್ಡ ಮಟ್ಟದ ಬಂಡವಾಳದೊಂದಿಗೆ ನಡೆಯುವುದರಿಂದ ಅವರಿಗೆ ಇದನ್ನು ನಿರ್ವಹಿಸುವುದು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಸಚ್ಚೀಂದ್ರ ಅವರ ಪತ್ನಿ ಜಯಲಕ್ಷ್ಮೀ ಯೂಟ್ಯೂಬ್ನಲ್ಲಿ ಗೆರಟೆಯ ಮೂಲಕ ಕಲಾಕೃತಿ ಮಾಡುವುದನ್ನು ನೋಡಿ ಅಭ್ಯಾಸ ಮಾಡಿಕೊಂಡರು. ಸಜೀಪಮೂಡದ ಕೊಳಕೆಯವರಾದ ಸಚ್ಚೀಂದ್ರ ಪ್ರಸ್ತುತ ಕುಕ್ಕಾಜೆಯಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಪತ್ನಿ, ಪತ್ನಿಯ ತಾಯಿ, ಮತ್ತೊಬ್ಬರು ಸಂಬಂಧಿ ಸೇರಿ 4 ಮಂದಿ ಇದ್ದಾರೆ.
“ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕಂಗಾಲಾಗಿ ಹೋಗಿದ್ದೆವು. ಹೀಗಾಗಿ ಇಂತಹ ಕಲಾಕೃತಿಗಳನ್ನು ಮಾಡುವ ಆಲೋಚನೆ ಮಾಡಿದ್ದೇವೆ. ಪ್ರಸ್ತುತ ಮೇಸ್ತ್ರಿ ಕೆಲಸದ ಜತೆಗೆ ಇದನ್ನು ನಿರ್ವಹಿಸುತ್ತೇವೆ. ಸಾಲ ಮಾಡಿ ಯಂತ್ರಗಳನ್ನು ತಂದಿದ್ದು, ಅದನ್ನು ಜೋಡಿಸಬೇಕಷ್ಟೆ. ಜತೆಗೆ ಕಲಾಕೃತಿಗಳಿಗೆ ಮಾರುಕಟ್ಟೆ ವಿಚಾರ ಮುಂದೆ ನಿರ್ಧಾರವಾಗಬೇಕಷ್ಟೆ”. ಸಚ್ಚೀಂದ್ರ ಮೇಸ್ತ್ರಿ, ಕಲಾಕೃತಿಗಳ ರಚನೆಕಾರ