Sunday, May 12, 2024
spot_imgspot_img
spot_imgspot_img

ಬಂಟ್ವಾಳ : ಅನಾರೋಗ್ಯದಿಂದ ನೊಂದು ಯುವ ಚಿತ್ರಕಾರ ಬಾವಿಗೆ ಹಾರಿ ಆತ್ಮಹತ್ಯೆ..!

- Advertisement -G L Acharya panikkar
- Advertisement -

ಬಂಟ್ವಾಳ: ಅನಾರೋಗ್ಯದಿಂದ ಹಾಗೂ ನಿರುದ್ಯೋಗದ ಸಮಸ್ಯೆಯಿಂದ ಬೇಸತ್ತ ಯುವ ಚಿತ್ರಕಾರನೊಬ್ಬ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.14ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.

ಚಿತ್ರಕಾರ ಸಾಗರ್ ಆಚಾರ್ಯ (26) ಎಂಬಾತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಬೆಳಗ್ಗೆ ಸುಮಾರು 8.30ರ ವೇಳೆಗೆ ಮನೆಯಂಗಳದಲ್ಲಿ ಇರುವ ಸುಮಾರು 30ಅಡಿ ಆಳದ ಬಾವಿಗೆ ಹಾರಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಗರ್ ಆತ್ಮಹತ್ಯೆ ಮಾಡಿಕೊಳ್ಳಲು ಸ್ಪಷ್ಟವಾದ ಕಾರಣ ನಿಗೂಢವಾಗಿದೆಯಾದರೂ ಆತನ ಅನಾರೋಗ್ಯದ ಕಾರಣ ಜೀವನದಲ್ಲಿ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿದೆ.

ಆದರೆ ಈತ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದಲ್ಲದೆ, ನೆರೆಹೊರೆಯವರ ಸ್ನೇಹಿತರ ಜೊತೆ ಈತನ ನೋವನ್ನು ಹೇಳಿಕೊಂಡಿದ್ದ ಎಂದು ಹೇಳಲಾಗಿದೆ. ಸಾಗರ್ ಒಬ್ಬ ಅತ್ಯದ್ಭುತ ಚಿತ್ರಕಾರ, ಆದರೆ ಆತನ ಕಲೆಗೆ ಜೀವ ತುಂಬಲು ಆ ವಿಧಿ ಬಿಡಲಿಲ್ಲ. ಕಲಾವಿದನಾಗಿದ್ದ ಸಾಗರ್ ಕಳೆದ ಎರಡು ವರ್ಷಗಳ ಹಿಂದೆ ಬಿಸಿರೋಡಿನ ಸಿ.ಡಿ.ಪಿ.ಒ.ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅದಾಗಲೇ ಈತನಿಗೆ ಮೊದಲೇ ಇದ್ದ ಕಿಡ್ನಿ ಸಮಸ್ಯೆ ಉಲ್ಬಣಗೊಂಡಿತು. ಹಾಗಾಗಿ ಈತ ಕೆಲಸ ಬಿಟ್ಟು ಮನೆಯಲ್ಲೇ ಇದ್ದ.

ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಲೇಬೇಕು ಎಂಬ ಸ್ಥಿತಿ ಒಂದೆಡೆ, ಇನ್ನೊಂದು ಕಡೆ ಎರಡು ಕಿಡ್ನಿ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಈತನ ತಂದೆಯ ಒಂದು ಕಿಡ್ನಿಯನ್ನು ನೀಡಲಾಗಿತ್ತು. ಮರದ ಕೆಲಸ ಮಾಡುತ್ತಿದ್ದ ತಂದೆಯವರು ಕಿಡ್ನಿ ಮಗನಿಗೆ ನೀಡಿದ ಬಳಿಕ ಕೆಲಸ ಮಾಡಲು ಸ್ವಲ್ಪ ಕಷ್ಟದ ಸ್ಥಿತಿ ಉಂಟಾಗಿತ್ತು. ಈ ನಡುವೆ ಮನೆಯಲ್ಲಿ ತಾಯಿಗೂ ಸ್ವಲ್ಪ ಅನಾರೋಗ್ಯದ ಸಮಸ್ಯೆ ಉಂಟಾಗಿತ್ತು. ಮನೆಯಲ್ಲಿ ಎಲ್ಲರು ಅನಾರೋಗ್ಯ ಪೀಡಿತರಾಗಿ ದುಡಿಯುವ ಕೈಗಳಿಗೆ ಶಕ್ತಿಯಿಲ್ಲ, ಔಷಧಿಗೆ ಹಣವಿಲ್ಲ, ಸರಿಯಾದ ಉದ್ಯೋಗವು ಇಲ್ಲ ಹೀಗೆ ಅನೇಕ ಬಾರಿ ಮನನೊಂದು ಈ ವಿಚಾರವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.

ಈತನಿಗೆ ಕಿಡ್ನಿ ವೈಫಲ್ಯದ ಸಮಸ್ಯೆ ಉಂಟಾದ ಆ ಸಂದರ್ಭದಲ್ಲಿ ಮಾಧ್ಯಮಗಳು ನೆರವಿಗಾಗಿ ವರದಿಗಳನ್ನು ಮಾಡಿತ್ತು. ಆದರೆ ಅತ್ಯಂತ ಕಷ್ಟಕರ ಜೀವನವನ್ನು ಸಹಿಸಲಾರದೆ ಸಾಗರ್ ಬಾವಿಗೆ ಹಾರಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಬಾವಿಯಿಂದ ಸಾಗರ್ ಅವರ ಮೃತದೇಹವನ್ನು ಬಂಟ್ವಾಳ ಅಗ್ನಿಶಾಮಕ ದಳದವರು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಸಾಗರ್ ಮೃತ ದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಬಂಟ್ವಾಳದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!