ಶಿವಮೊಗ್ಗ: ಯುವಕನೋರ್ವನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಇಲಿಯಾಸ್ ನಗರದ ನೂರು ಅಡಿ ರಸ್ತೆ ಬಳಿ ನಡೆದಿದೆ.
ಆಸೀಫ್ (25)ಮೃತ ಯುವಕ. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಆಸೀಫ್(25) ಎಂಬಾತನಿಗೆ ಜಬಿ ಎಂಬಾತ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಮೃತ ಯುವಕ ಶಿವಮೊಗ್ಗದ ಮಂಡ್ಲಿ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ.
ಅಸೀಫ್ ಇಲಿಯಾಸ್ ನಗರಕ್ಕೆ ಬಂದಿದ್ದ ವೇಳೆ ಅದೇ ಏರಿಯಾದ ಜಬೀ ಎಂಬಾತ ದಾಳಿ ನಡೆಸಿದ್ದು, ಏಕಾಏಕಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಆಟೋ ಡ್ರೈವರ್ ಅಸೀಫ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಅಸೀಫ್ ಮೃತದೇಹವನ್ನು ಮೆಗ್ಗಾನ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್, ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಅಲ್ಲದೆ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ ವಿಚಾರಣೆ ನಡೆಸಲಾಗುತ್ತಿದ್ದು, ಕೃತ್ಯದ ಹಿಂದಿನ ಕಾರಣ ತನಿಖೆಯಿಂದ ಬಯಲಾಗಬೇಕಿದೆ.