


ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 (BBK12 Finale) ಅಂತಿಮ ಹಂತ ತಲುಪಿದ್ದು, ಫಿನಾಲೆಗೂ ಮುನ್ನ ನಡೆದ ಎಲಿಮಿನೇಷನ್ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ರಘು 5ನೇ ಸ್ಥಾನ ಪಡೆದು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದರೊಂದಿಗೆ ಕಾವ್ಯ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಸ್ಪರ್ಧೆಯಿಂದ ಹೊರಬಂದಿದ್ದಾರೆ.

ಟಾಸ್ಕ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿದ್ದ ಧನುಷ್ ಅವರು ಫಿನಾಲೆಗೆ ಮುನ್ನವೇ ಎಲಿಮಿನೇಟ್ ಆಗಿರುವುದು ವೀಕ್ಷಕರಿಗೆ ಭಾರೀ ಶಾಕ್ ನೀಡಿದೆ. ಧನುಷ್ ಎಲಿಮಿನೇಷನ್ ಬಗ್ಗೆ ರಘು, ಕಾವ್ಯ, ಅಶ್ವಿನಿ, ಗಿಲ್ಲಿ ಸೇರಿದಂತೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸ್ಪರ್ಧಿಗಳಿಗೆ ತಮಾಷೆಯ ಪ್ರಶಸ್ತಿಗಳು
ಫಿನಾಲೆ ಹಂತದಲ್ಲಿ ಸ್ಪರ್ಧಿಗಳಿಗೆ ಕೆಲವು ವಿಶೇಷ ಹಾಗೂ ತಮಾಷೆಯ ಪ್ರಶಸ್ತಿಗಳನ್ನು ನೀಡಲಾಗಿದೆ.
‘ಮೈಕಲ್ ಜಾಕ್ಸನ್’ ಪ್ರಶಸ್ತಿ – ಧ್ರುವಂತ್ (₹1 ಲಕ್ಷ ಬಹುಮಾನ)
‘ಲೌಡ್ ಸ್ಪೀಕರ್’ ಪ್ರಶಸ್ತಿ – ರಿಷಾ (₹1 ಲಕ್ಷ ಬಹುಮಾನ)
‘ಕಣ್ಣೀರ ಕಣ್ಮಣಿ’ ಪ್ರಶಸ್ತಿ – ರಾಶಿಕಾ (₹1 ಲಕ್ಷ ಬಹುಮಾನ)
ರಘು – 5ನೇ ಸ್ಥಾನ
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಘು ಆರಂಭದಲ್ಲಿ ಜೋರಾದ ಧ್ವನಿ ಮತ್ತು ನೇರ ನಡೆನಡವಳಿಕೆಯಿಂದ ಗಮನ ಸೆಳೆದಿದ್ದರು. ದಿನ ಕಳೆದಂತೆ ಮೃದು ಸ್ವಭಾವ ತಾಳಿದ ಅವರು ಮನೆಯವರೊಂದಿಗೆ ಬೆರೆಯಲು ಆರಂಭಿಸಿದರು.
ಅಶ್ವಿನಿ ಗೌಡ ಅವರ ಜತೆಗಿನ ವಾಗ್ವಾದ, ಧ್ರುವಂತ್ ಅವರ ಜತೆಗಿನ ಕಿರಿಕ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಡುಗೆ ಕೆಲಸದಲ್ಲಿ ಸದಾ ತೊಡಗಿಸಿಕೊಂಡಿದ್ದ ರಘು, ರಕ್ಷಿತಾ ಹಾಗೂ ಗಿಲ್ಲಿ ಅವರ ಜತೆ ಆತ್ಮೀಯರಾಗಿದ್ದರು. ಟಾಸ್ಕ್ ವಿಚಾರದಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡ ರಘು, ಕ್ಯಾಪ್ಟನ್ ಹಾಗೂ ಪ್ರಿನ್ಸಿಪಾಲ್ ಆಗಿಯೂ ಖಡಕ್ ನಿರ್ಧಾರಗಳಿಂದ ಮೆಚ್ಚುಗೆ ಪಡೆದಿದ್ದರು.
ಮನೆಯಿಂದ ಹೊರಬಂದ ಬಳಿಕ, “ಬಿಗ್ ಬಾಸ್ ಅನುಭವದಿಂದ ಹೊಸ ಜೀವನವನ್ನು ಆರಂಭಿಸುತ್ತೇನೆ” ಎಂದು ರಘು ಹೇಳಿದ್ದಾರೆ.
ಕಾವ್ಯ – 4ನೇ ಸ್ಥಾನ
ಬಲಿಷ್ಠ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕಾವ್ಯ, ಫಿನಾಲೆಗೂ ಮುನ್ನ 4ನೇ ಸ್ಥಾನ ಪಡೆದು ಜೊತೆಗೆ 10 ಲಕ್ಷ ರೂ.ಗಳನ್ನು ಪಡೆದುಕೊಂಡು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಆಟ, ಅಭಿಪ್ರಾಯ ವ್ಯಕ್ತಪಡಿಸುವ ಧೈರ್ಯ ಹಾಗೂ ನಿರಂತರ ಹೋರಾಟದಿಂದ ಕಾವ್ಯ ವೀಕ್ಷಕರ ಗಮನ ಸೆಳೆದಿದ್ದರು.
ಫಿನಾಲೆ ಹಂತಕ್ಕೆ ಸ್ಪರ್ಧೆ ತೀವ್ರಗೊಂಡಿದ್ದು, ಉಳಿದ ಸ್ಪರ್ಧಿಗಳಾದ ಗಿಲ್ಲಿ , ಅಶ್ವಿನಿ ಹಾಗೂ ರಕ್ಷಿತಾ ನಡುವಿನ ಪೈಪೋಟಿ ಇನ್ನಷ್ಟು ರೋಚಕವಾಗಲಿದೆ. ಇವರಲ್ಲಿ ಯಾರು ಗೆಲ್ಲಬಹುದು ಎಂಬ ಕಾತುರ ವೀಕ್ಷಕರದ್ದು..








