ಬಂಟ್ವಾಳ: ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಕಾರ್ಮಿಕ ರಿಗೆ ಸಂಬಳ ನೀಡಿಲ್ಲ ಎಂದು ಕಾರ್ಮಿಕರು ಕ್ಯಾಂಟೀನ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಡವರ ಹಸಿವು ನೀಗಿಸಲು ಸರಕಾರ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಗೆ ಕಾರ್ಮಿಕ ರು ಬೀಗ ಹಾಕಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಕಳೆದ ಐದು ತಿಂಗಳಿನಿಂದ ಇಲ್ಲಿ ದುಡಿಯುವ ಕಾರ್ಮಿಕರಿಗೆ ಹೊರಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ವೇತನ ನೀಡದೆ ಸತಾಯಿಸುತ್ತಿರುವುದಲ್ಲದೆ, ದರ್ಪದ ಮಾತುಗಳ ಮೂಲಕ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಅವರು ದೂರಿದ್ದು, ಇಂದಿರಾ ಕ್ಯಾಂಟೀನ್ ಗೆ ಅಗಸ್ಟ್ 6 ರಿಂದ ಬೀಗ ಹಾಕಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಕೂಡ ಜೀವದ ಹಂಗು ತೊರೆದು ಬಡವರಿಗೆ ಕಷ್ಟ ವಾಗಬಾರದೆಂದು ನಾವು ಊಟ ನೀಡಿದ್ದೇವೆ ಆದರೆ ನಮ್ಮ ಕಷ್ಟದ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಂಡಿಲ್ಲ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಸಂಬಂಧಿಸಿದವರು ಶೀಘ್ರವಾಗಿ ಕಾರ್ಮಿಕರ ಸಂಬಳ ನೀಡಲು ಕ್ರಮ ಕೈಗೊಳ್ಳಲು ಬಂಟ್ವಾಳ ಇಂದಿರಾ ಕ್ಯಾಂಟೀನ್ ಕಾರ್ಮಿಕ ಶಶಿಕುಮಾರ್ ಅವರು ಎಲ್ಲಾ ಕಾರ್ಮಿಕರ ಪರವಾಗಿ ಒತ್ತಾಯಿಸಿದ್ದಾರೆ.