ಬೆಳ್ಳಾರೆ: ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಹಣ ಬಂದಿದೆಯೆಂದು ಅಪರಿಚಿತ ವ್ಯಕ್ತಿಯೋರ್ವ ಜನರನ್ನು ಯಾಮಾರಿಸಿ ಹಣ ಮತ್ತು ಚಿನ್ನವನ್ನು ದೋಚುತ್ತಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಘಟನೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಕೊಡಿಯಾಲ ಗ್ರಾಮದ ಸುಳ್ಯ ನಿವಾಸಿಯಾದ ರಾಧಾಕೃಷ್ಣ ಗೌಡ (67) ಎಂಬವರ ದೂರಿನಂತೆ ದಿನಾಂಕ 20-05-2023 ಬೆಳ್ಳಾರೆ ಕೆಳಗಿನ ಪೇಟೆಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಬಂದು ತನ್ನನ್ನು ಬ್ಯಾಂಕ್ ಉದ್ಯೋಗಿ ಎಂಬುದಾಗಿ ಹೇಳಿ ಪರಿಚಯಿಸಿಕೊಂಡು, ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಕೆಲವು ಆಯ್ದ ವ್ಯಕ್ತಿಗಳಿಗೆ ರೂ 1 ಲಕ್ಷದ 7 ಸಾವಿರ ರೂಪಾಯಿ ಬಂದಿದೆ.
ಹಣವನ್ನು ಪಡೆಯಲು 7 ಸಾವಿರ ನಗದು ಹಣ ಕೊಡಿ ಎಂಬುದಾಗಿ ಹೇಳಿದ್ದು, ರಾಧಾಕೃಷ್ಣ ಗೌಡ ಅವರ ಬಳಿ ಹಣವಿರದಿದ್ದ ಕಾರಣ ಅವರಲ್ಲಿದ್ದ ಅಂದಾಜು ಸುಮಾರು ಐದೂವರೆ ಗ್ರಾಂ ತೂಕದ ಚಿನ್ನದ ಉಂಗುರವನ್ನು ನೀಡಿರುತ್ತಾರೆ. ಆರೋಪಿಯು ಸದರಿ ಉಂಗುರವನ್ನು ಪಡೆದುಕೊಂಡು ವಂಚಿಸಿ ಪರಾರಿಯಾಗಿರುತ್ತಾನೆ ಎಂಬುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುದ್ಮಾರು ಗ್ರಾಮ,ಕಡಬ ನಿವಾಸಿಯಾದ ಲೀಲಾವತಿ (55) ಎಂಬವರ ದೂರಿನಂತೆ ಸದ್ರಿಯವರು ಆ.17ರಂದು ಬೆಳಿಗ್ಗೆ ತಮ್ಮ ಮನೆಯಲ್ಲಿದ್ದಾಗ ಅಂದಾಜು 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಬಂದು ತಾನು ಬ್ಯಾಂಕ್ ಉದ್ಯೋಗಿಯೆಂದು ತನ್ನನ್ನು ಪರಿಚಯಿಸಿಕೊಂಡು, ಬ್ಯಾಂಕ್ ಖಾತೆಗೆ ಪ್ರಧಾನಮಂತ್ರಿಗಳ ಯೋಜನೆಯಿಂದ ರೂಪಾಯಿ 1,00,000/- ಹಣ ಬಂದಿರುತ್ತದೆ ಹಾಗೂ ಹಣವನ್ನು ಪಡೆಯಲು ರೂಪಾಯಿ 31,000/ವನ್ನು ಡೆಪಾಸಿಟ್ ಮಾಡಬೇಕು ಎಂದು ತಿಳಿಸಿ, ರೂ. 31,000/ವನ್ನು ಮೋಸದಿಂದ ಪಡೆದು ವಂಚಿಸಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.