ಬೆಳ್ತಂಗಡಿ: ‘ಖಾಸಗಿ ಕ್ಲಿನಿಕ್ಗಳ ವೈದ್ಯರು ರೋಗಿಗಳಿಗೆ ಹಣ ನೋಡಿ ಚಿಕಿತ್ಸೆ ನೀಡುತ್ತಾರೆ ಅಥವಾ ರೋಗಿಗಳಿಂದ ದುಬಾರಿ ಹಣ ವಸೂಲಿ ಮಾಡುತ್ತಾರೆ’ ಎಂಬ ದೂರು ಸಾಮಾನ್ಯವಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆಯ ಚಿಕಿತ್ಸಾ ಕ್ಲಿನಿಕ್ನ ಡಾ.ವೇಣುಗೋಪಾಲ ಶರ್ಮ ಅವರ ಸೇವೆ ಭಿನ್ನವಾಗಿದೆ. ಅವರು ’10 ರೂಪಾಯಿಯ ಡಾಕ್ಟರ್’ ಎಂದೇ ಜನಪ್ರಿಯರಾದವರು.
‘ಬಡವರ ವೈದ್ಯ’ರೆಂದೇ ಗುರುತಿಸಿಕೊಂಡ ಡಾ.ವೇಣುಗೋಪಾಲ ಶರ್ಮ ಸಾವಿರಾರು ಮಂದಿಗೆ ಗುಣಮಟ್ಟದ ಚಿಕಿತ್ಸೆ ನೀಡಿದ್ದು, ಯಾವ ರೋಗಿಯ ಕೈಯಿಂದಲೂ ಇವರು ಇಂತಿಷ್ಟೇ ಶುಲ್ಕ ಎಂದೂ ಪಡೆದಿಲ್ಲ. ಕಳೆದ 31 ವರ್ಷಗಳಿಂದ ಕ್ಲಿನಿಕ್ ಹೊಂದಿರುವ ಇವರು, ಸಾಮಾನ್ಯ ಕಾಯಿಲೆ ಎಂದು ಬರುವ ಪ್ರತಿ ರೋಗಿಗೂ ಉತ್ತಮವಾಗಿ ಸ್ಪಂದಿಸಿದ್ದು, ಪ್ರಸ್ತುತ ಕೋವಿಡ್ ಸಂದರ್ಭದಲ್ಲೂ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿ, ತನ್ನ ಬಳಿ ಬರುವ ಎಲ್ಲಾ ರೋಗಿಗಳನ್ನು ಬಹಳ ಪ್ರೀತಿಯಂದ ಮಾತನಾಡಿಸಿ, ಚಿಕಿತ್ಸೆ ನೀಡುವ ಇವರ ಸೇವಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
‘1989ರಲ್ಲಿ ಕ್ಲಿನಿಕ್ ಆರಂಭಿಸಿದ ನಂತರ ಯಾವತ್ತೂ ಇಂತಿಷ್ಟು ದರ ನಿಗದಿ ಮಾಡಿಲ್ಲ. ಈ ಹಿಂದೆ ಚಿಕಿತ್ಸೆಗೆ ಬಂದವರು ಅವರಾಗಿಯೇ ₹ 2 ಕೊಡುತ್ತಿದ್ದು, ನಂತರ ₹ 5 ಕೊಡಲು ಆರಂಭಿಸಿದರು. ಆವಾಗ ‘5 ರೂಪಾಯಿ ಡಾಕ್ಟರ್’ ಎಂದು ಕರೆಸಿಕೊಂಡೆ. ಈವಾಗ ₹ 10 ಕೊಡಲು ಆರಂಭಿಸಿದ್ದಾರೆ. ಹಾಗಾಗಿ ’10 ರೂಪಾಯಿ ಡಾಕ್ಟರ್’ ಎಂದೆನಿಸಿದ್ದೇನೆ’ ಎಂದು ನಗುತ್ತಾ ಹೇಳುತ್ತಾರೆ ಡಾ.ಶರ್ಮ. ‘ರಕ್ತದೊತ್ತಡ ಇನ್ನಿತರ ಸಾಮಾನ್ಯ ಪರೀಕ್ಷೆಗಳಿಗೆ ಶುಲ್ಕ ಪಡೆಯುದಿಲ್ಲ. ಆದರೂ ಜನ ಹಣ ನೀಡುತ್ತಾರೆ.
‘ದಿನದಲ್ಲಿ 250ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದ್ದೂ ಇದೆ. ಇವರಿಗೆ ಸಹಾಯಕರಾಗಿ ಯಾರೊಬ್ಬರೂ ಕೂಡ ಇಲ್ಲ. ಬೆಳಿಗ್ಗಿನಿಂದಲೇ ಚಿಕಿತ್ಸೆ ಆರಂಭಿಸುವ ಇವರು ರೋಗಿಗಳ ಸರತಿ ಖಾಲಿಯಾದ ಮೇಲೆಯೇ ಮಧ್ಯಾಹ್ನದ ಊಟ. ಹೀಗಾಗಿ, ಸಾಕಷ್ಟು ಬಾರಿ ಮಧ್ಯಾಹ್ನದ ಊಟ ಸಂಜೆ ಮಾಡಿದ್ದು ಇದೆ. ಸಂಜೆ ಮತ್ತೆ ತೊಡಗಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವ ಕಾಯಕ ಮಾಡುತ್ತಾರೆ.