ಬೆಳ್ತಂಗಡಿ : ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಉಜಿರೆ ಕಾಲೇಜ್ ವಿದ್ಯಾರ್ಥಿನಿ ಧರ್ಮಸ್ಥಳ ಪಾಂಗಾಳ ನಿವಾಸಿ ಸೌಜನ್ಯ (17) ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ ಪ್ರಕರಣ 11 ವರ್ಷಗಳ ಬಳಿಕ ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ನಿಂದ ಜೂನ್ 16 ರಂದು (ಇಂದು) ತೀರ್ಪು ಪ್ರಕಟವಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಪ್ರಕರಣದ ದೋಷಮುಕ್ತ ಎಂದು ಸಿಬಿಐ ನ್ಯಾಯಧೀಶ ಸಂತೋಷ್ ಸಿ.ಬಿ ಆದೇಶ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಗಳ ಎರಡನೇ ಮಗಳು ಸೌಜನ್ಯ (17) ಕಾಲೇಜ್ ಮುಗಿಸಿ ಮನೆಗೆ ವಾಪಸ್ ಹೋಗುವಾಗ 9-10-2012 ರಂದು ಸಂಜೆ 4:15 ಕ್ಕೆ ನಾಪತ್ತೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
10-10-2012 ರಂದು ರಾತ್ರಿ 10.30 ಕ್ಕೆ ಧರ್ಮಸ್ಥಳ ಮಣ್ಣಸಂಖದಲ್ಲಿ ಶವ ಪತ್ತೆಯಾಗಿತ್ತು. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರೇಪ್ & ಮರ್ಡರ್ ಆಗಿ ಪ್ರಕರಣ ದಾಖಲಾಗಿತ್ತು. 11-10-2012 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೋನಿಯ ಸಂತೋಷ್ ರಾವ್ (38) ಬಾಹುಬಳಿ ಬೆಟ್ಟದ ಗುಡದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಪೊಲೀಸರಿಂದ ಬಂಧಿಸಲಾಗಿತ್ತು. ಈ ಬಗ್ಗೆ ರಾಜ್ಯ ಸರಕಾರ ಸಿಐಡಿ ತನಿಖೆಗೆ ನೀಡಿತ್ತು. ನಂತರದ ದಿನಗಳಲ್ಲಿ ಪ್ರತಿಭಟನೆ ಕೂಗು ಹೆಚ್ಚಾದ ಕಾರಣದಿಂದ ರಾಜ್ಯ ಸರಕಾರ ಮತ್ತೆ ಕೇಂದ್ರ ಸಿಬಿಐ ತನಿಖೆ ನಡೆಸಲು ಆದೇಶ ಮಾಡಿತ್ತು, ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದು, ಆರೋಪಿ ಸಂತೋಷ್ ರಾವ್ ಬೆಂಗಳೂರು ಸಿಬಿಐ ಕೋರ್ಟ್ ಗೆ ಕಳೆದ ಆರು ಬಾರಿಗೂ ಹೆಚ್ಚು ಹಾಜರಾಗದ ತಲೆಮರೆಸಿಕೊಂಡಿದ್ದು, ಇದಾದ ಬಳಿಕ ಕೋರ್ಟ್ ಜೂನ್ 16 ರಂದು ಖುದ್ದು ಹಾಜರಾಗಲು ಸಮನ್ಸ್ ನೀಡಿತ್ತು. ಅದರಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಇದೀಗ ಆರೋಪಿ ಸಂತೋಷ್ ರಾವ್ ದೋಷಮುಕ್ತನಾಗಿದ್ದಾನೆ.