ಬೆಳ್ತಂಗಡಿ: ಇಲ್ಲಿನ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ಆಟೊರಿಕ್ಷಾ ಚಾಲಕ ಹಾಗೂ ಆತನ ಸಹೋದರನ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ತಡರಾತ್ರಿಯೇ ಬಂಧಿಸಿದ್ದಾರೆ.
ಹಲ್ಲೆಗೆ ಒಳಗಾದವರು ಗೋವಿಂದೂರು ಶಾಲೆಯ ಬಳಿ ನಲ್ಲಿ ಗುಡ್ಡೆ ನಿವಾಸಿ ಆಟೋ ಚಾಲಕ ಹೈದರ್ ಹಾಗೂ ಆತನ ಅಣ್ಣ ರಫೀಕ್ ಎನ್ನಲಾಗಿದೆ. ಬಂಧಿತ ಆರೋಪಿಗಳು ಗೇರುಕಟ್ಟೆಯ ಅಶುತೋಷ್ ಹಾಗೂ ಆತನ ಇಬ್ಬರು ಸಹಚರರು ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿಯ ವೇಳೆ ಹೈದರ್ ಹಾಗೂ ರಫೀಕ್ ತಮ್ಮ ರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಶುತೋಷ್ ಹಾಗೂ ಆತನ ಸಹಚರರು ಅವರನ್ನು ಅಡ್ಡಗಟ್ಟಿ ದಾಳಿ ನಡೆಸಿರುವುದಾಗಿ ಆರೋಪಿಸಲಾಗಿದೆ. ಇಬ್ಬರ ಮೇಲೂ ತಲವಾರಿನಿಂದ ದಾಳಿ ನಡೆಸಲಾಗಿದ್ದು,ಚೂರಿಯಿಂದ ಇರಿಯಲಾಗಿದೆ. ಇದರಿಂದ ಹೈದರ್ ಹಾಗೂ ರಫೀಕ್ ಗಂಭೀರ ಗಾಯಗೊಂಡಿದ್ದಾರೆ.
ಬೊಬ್ಬೆ ಕೇಳಿ ಸ್ಥಳಿಯರು ಘಟನಾ ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣವೇ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.