ಪುತ್ತೂರು: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಗೋವುಗಳನ್ನು ಅಕ್ರಮವಾಗಿ ಕೇರಳಕ್ಕೆ ಪಿಕಪ್ ವಾಹನವೊಂದರಲ್ಲಿ ಸಾಗಿಸುತಿದ್ದಾಗ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬೆಟ್ಟಂಪಾಡಿ ಬಳಿ ದಾಳಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ .
ಪಿಕಪ್ ವಾಹನದಲ್ಲಿದ್ದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ದಾಳಿಯ ಸಮಯ ಪಿಕಪ್ ವಾಹನದಲ್ಲಿದ್ದ ಎರಡು ಹಸುಗಳನ್ನು ರಕ್ಷಿಸಲಾಗಿದೆ . ಪುತ್ತೂರು ಕಸಬಾದ ಕರ್ಕುಂಜ ನಿವಾಸಿ ಮಹಮ್ಮದ್ ಕುಂಞ ಎಂಬವರ ಮಗ ಹಂಝ(42) ಬಂಧಿತ ಆರೋಪಿ. ಬೆಳಿಯೂರುಕಟ್ಟೆಯ ಸಿದ್ದಿಕ್ ಪರಾರಿಯಾದ ಆರೋಪಿ.
ಪುತ್ತೂರು ಕಡೆಯಿಂದ ಕೆರಳದ ಕಡೆಗೆ ಒಡ್ಯದ ಮೂಲಕ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆ ಎಸ್ಐ ಉದಯ ರವಿ ನೇತ್ರತ್ವದಲ್ಲಿ ಪೋಲೀಸರ ತಂಡವು ಪಾಣಾಜೆ ಸಮೀಪದ ಒಡ್ಯ ಎಂಬಲ್ಲಿ ನಾಕಬಂದಿ ಹಾಕಿದ್ದರು.
ಬೆಟ್ಟಂಪಾಡಿ ಸಮೀಪದ ಮಿತ್ತಡ್ಕ ಕಡೆಯಿಂದ ಒಡ್ಯ ಕಡೆಗೆ ಬಂದ ಪಿಕಪ್ ವಾಹನವನ್ನು ಪೊಲೀಸರು ಓಡ್ಯದಲ್ಲಿ ತಡೆದು ನಿಲ್ಲಿಸಿದ್ದು, ಅದರಲ್ಲಿದ್ದ ಆರೋಪಿ ಸಿದ್ದಿಕ್ ಓಡಿ ತಪ್ಪಿಕೊಂಡಿದ್ದಾನೆ. ಮತ್ತೋರ್ವ ಆರೋಪಿ ಚಾಲಕ ಹಂಝ ಕೂಡ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಆರೋಪಿ ಹಂಝನಲ್ಲಿ ಜಾನುವಾರು ಸಾಗಾಟದ ಪರವಾನಿಗೆ ಇಲ್ಲದಿರಿವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿ ಬೆಳಿಯೂರುಕಟ್ಟೆಯ ಸಿದ್ದಿಕ್ ಎಂಬಾತನಿಂದ ಎರಡು ಹಸುಗಳನ್ನು ಖರೀದಿ ಮಾಡಿ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಮಾಂಸ ಮಾಡುವ ಉದ್ದೇಶಕ್ಕಾಗಿ ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಹಂಝ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಅಲ್ಲದೇ ಈ ಅಕ್ರಮ ಗೋ ಸಾಗಾಟ ಕಾರ್ಯದಲ್ಲಿ ಸಿದ್ದಿಕ್ ತನಗೆ ಸಾಥ್ ನೀಡಿರುವುದಾಗಿಯೂ ತಿಳಿಸಿದ್ದಾನೆ. ಆರೋಪಿಗಳು ಹಸು ಸಾಗಾಟ ಮಾಡಲು ಉಪಯೋಗಿಸಿದ ಅಂದಾಜು 4,50,000 ರೂ ಮೌಲ್ಯದ KA 21B 3411 ನಂಬ್ರದ ಪಿಕಪ್ ವಾಹನ ಹಾಗೂ ತಲಾ 20,000 ರೂ. ಒಟ್ಟು 40,000 ಮೌಲ್ಯದ 2 ಹಸುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.