




ಮುಂಡಾಜೆ: ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಇಂದಬೆಟ್ಟು ಗಡಿಭಾಗದ ಅರಸಮಜಲು ಬಳಿ ಬುಧವಾರ ಸಂಭವಿಸಿದೆ.
ಮುಂಡಾಜೆ ಗ್ರಾಮದ ಕುಳೂರು ನಿವಾಸಿ ನಿಶಾಂತ್(16) ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ. ನಿಶಾಂತ್ ಮೂಲತಃ ಕೇರಳದವರಾಗಿದ್ದು, ಹಲವು ವರ್ಷಗಳ ಹಿಂದೆ ಆತನ ಹೆತ್ತವರು ಮುಂಡಾಜೆಗೆ ಬಂದು ನೆಲೆಸಿ, ಸ್ಥಳೀಯ ತೋಟಗಳಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.
ಕೆಲವು ವರ್ಷಗಳ ಹಿಂದೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಬೆಂಕಿ ಅವಘಡವೊಂದರಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ. ನಿಶಾಂತ್ ನ ಅಕ್ಕ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿ ಇವರಿಬ್ಬರೇ ಇದ್ದು, ಊಟ, ತಿಂಡಿಗೆ ಸಮೀಪದ ಚಿಕ್ಕಮ್ಮನ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಸ್ಥಳೀಯ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದ ನಿಶಾಂತ್ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ರಜೆಯ ಹಿನ್ನೆಲೆ ಬುಧವಾರ ಮಧ್ಯಾಹ್ನದ ವೇಳೆಗೆ ಸಂಬಂಧಿಕರೊಂದಿಗೆ ಸ್ನಾನಕ್ಕಾಗಿ ನದಿಗೆ ತೆರಳಿದ್ದ ಸಮಯ ನದಿಯ ಆಳ ತಿಳಿಯದೆ ಸಾಗಿದ ಆತ ಆಳ ನೀರಿನಲ್ಲಿ ಮುಳುಗಿದ್ದು, ಜತೆಗಿದ್ದವರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಸುಮಾರು 10 ಅಡಿ ಆಳದಲ್ಲಿ ಸಿಲುಕಿದ್ದ ಮೃತ ದೇಹವನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು ಮತ್ತು ಸ್ಥಳೀಯರು ಸೇರಿ ಮೇಲಕ್ಕೆತ್ತಿದರು. ಘಟನೆ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.








