ಬೆಳ್ತಂಗಡಿ: ಮಹಿಳೆಯೋರ್ವರು ಬೆಳಗ್ಗೆ ಮನೆಯಿಂದ ಸೊಪ್ಪು ತರಲು ಹೊರ ಹೋದವರು ಹಿಂತಿರುಗಿ ಬಾರದೇ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿ ನಡೆದಿದೆ. ನೇಲ್ಯಡ್ಕದ ಉರ್ನಡ್ಕ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ ನಾಪತ್ತೆಯಾದ ಮಹಿಳೆ.
ಶಕುಂತಲಾ ಅವರು ಬೆಳಗ್ಗೆ ಸೊಪ್ಪು ತರಲೆಂದು ಮನೆಯಿಂದ ಹೊರ ಹೋದವರು ಮನೆಗೆ ಬಾರದೇ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಇದೀಗ ಅವರ ಚಪ್ಪಲಿಗಳು ಉದನೆಯ ಗುಂಡ್ಯ ನದಿ ದಡದಲ್ಲಿ ಪತ್ತೆಯಾಗಿದ್ದು, ಮಹಿಳೆ ನದಿಗೆ ಹಾರಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾದ ಮಹಿಳೆ ನಿನ್ನೆ ಬೆಳಗ್ಗೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತನ್ನ ಹಿರಿಯ ಮಗನಿಗೆ ಕರೆ ಮಾಡಿ ತಮ್ಮನ ಮದುವೆ ಜವಾಬ್ದಾರಿ ನೀನೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು ಎನ್ನಲಾಗಿದೆ. ಇದರಿಂದ ಮಹಿಳೆ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂಬ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.
ಇದನ್ನೂ ಓದಿ:- ಬ್ರಹ್ಮಾವರ: ಮನೆ, ದೇವಸ್ಥಾನಗಳಿಂದ ಕಳವು ಪ್ರಕರಣ; ನಾಲ್ವರು ಆರೋಪಿಗಳು ಅಂದರ್
ಸ್ಥಳಕ್ಕೆ ಅಗ್ನಿಶಾಮಕ ದಳದವರು, ಸ್ಥಳೀಯರು ಹಾಗು ಮುಳುಗು ತಜ್ಞರು ಆಗಮಿಸಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿ ತುಂಬಿ ಹರಿಯುತ್ತಿರುವದರಿಂದ ಶೋಧ ಕಾರ್ಯ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.