ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸುಮಾರು 2 ಕ್ವಿಂಟಾಲ್ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದರು.
ನಗರದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು 10 ರಿಂದ 15 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಟ್ಯಾಂಕರ್ ನಲ್ಲಿ ಗಾಂಜಾ ತರುತ್ತಿದ್ದ ಆರೋಪಿಗಳು ನಗರದಲ್ಲಿ ದೊಡ್ಡ ನೆಟ್ ವರ್ಕ್ ಹೊಂದಿದ್ದಾರೆ. ಇವರ ಸಂಪರ್ಕದಲ್ಲಿದ್ದವರ ನಂಬರ್ ಕೂಡ ಸಿಕ್ಕಿದ್ದು, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
204 ಕೆ.ಜಿ. ಗಾಂಜಾ ವಶಕ್ಕೆ :
ಡಿ.ಅನಿಕಾ, ಅನೂಪ್, ರಾಜೇಶ್ ಬಂಧಿತ ಆರೋಪಿಗಳು. ಇವರಿಂದ 511 ಎಂಡಿಎಂಎ ಗುಳಿಗೆಗಳು ಹಾಗೂ 180 ಎಲ್ಎಸ್ಡಿ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 2 ಕೋಟಿ ರೂಗೂ ಹೆಚ್ಚು ಇರಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಆರೋಪಿಗಳಿಂದ ಒಂದು ಲಾರಿ, ಒಂದು ಕಾರು, 3 ಮೊಬೈಲ್, 204 ಕೆ.ಜಿ. ಗಾಂಜಾ ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬೆಂಗಳೂರು, ಮಂಗಳೂರು,ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಹಲವೆಡೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಇನ್ನುಳಿದವರನ್ನು ಕೂಡ ಸಿಸಿಬಿ ಅಧಿಕಾರಿಗಳು ಬಂಧಿಸಲಿದ್ದಾರೆ. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ 35 ಸಾವಿರ ರೂ.ಬಹುಮಾನ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.