ವಿಜಯಪುರ: ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಹೈ ಅಲರ್ಟ್ ಆಗಿದ್ದು, ವಿಜಯಪುರಕ್ಕೆ ಆಗಮಿಸಿದ್ದ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ವಿಜಯಪುರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಮೊನ್ನೆ ತಡರಾತ್ರಿ ವಿಜಯಪುರಕ್ಕೆ ಆಗಮಿಸಿದ್ದ ಐಜಿ ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು.
ಅಲ್ಲದೇ, ಎಷ್ಟು ಬೇಕೋ ಅಷ್ಟು ಸಿಬ್ಬಂದಿಯನ್ನು ಬಳಸಿ ಘಟನಾ ಸ್ಥಳದಲ್ಲಿ ಇಂಚಿಂಚೂ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದರು. ಅಲ್ಲಿಂದ ಮರಳಿದ ಬಳಿಕ ವಿಜಯಪುರದಲ್ಲಿಯೇ ಠಿಕಾಣಿ ಹೂಡಿದ ಐಜಿ ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು, ವಿಜಯಪುರ ಪೊಲೀಸರಿಗೆ ಹಲವಾರು ರೀತಿಯಲ್ಲಿ ತನಿಖೆ ನಡೆಸುವ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೇ, ವಿಜಯಪುರ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಶೂಟೌಟ್ ಸಂದರ್ಭದಲ್ಲಿ ಎರಡೂ ಕಡೆಯಿಂದ 17 ಸುತ್ತು ಗುಂಡಿನ ದಾಳಿ ನಡೆದಿದೆ. ಘಟನಾ ಸ್ಥಳದಲ್ಲಿ 8 ಸುತ್ತು ಖಾಲಿ ಗುಂಡುಗಳು, 5 ಜೀವಂತ ಗುಂಡುಗಳು ಮತ್ತು ಮಹಾದೇವ ಸಾಹುಕಾರ ಭೈರಗೊಂಡ ಸಂಚರಿಸುತ್ತಿದ್ದ ಕಾರಿನಲ್ಲಿ 4 ಖಾಲಿ ಗುಂಡುಗಳು ಪತ್ತೆಯಾಗಿವೆ. ಹೀಗಾಗಿ ಒಟ್ಟು 17 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಮತ್ತೊಂದೆಡೆ ನಾನಾ ಪೊಲೀಸ್ ಅಧಿಕಾರಿಗಳ ತಂಡಗಳು ಹಲವಾರು ಆಯಾಮಗಳಲ್ಲಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಸಂಪೂರ್ಣ ತನಿಖೆಗೆ ಸುಮಾರು 10ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದ್ದು, ಒಂದೊಂದು ತಂಡಕ್ಕೆ ಒಂದೊಂದು ಜವಾಬ್ದಾರಿಯನ್ನು ನೀಡಲಾಗಿದೆ.
ಪ್ರಕರಣ ತನಿಖೆಗೆ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ನೇತೃತ್ವದಲ್ಲಿ 10ಕ್ಕೂ ಹೆಚ್ಚು ತಂಡಗಳ ರಚನೆ ಮಾಡಲಾಗಿದ್ದು, ಹಂತಕರ ಪತ್ತೆಗೆ 37 ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಘಟನೆ ನಡೆದ ಸ್ಥಳದ ಸುತ್ತಲೂ 3 ಕೀ.ಮೀ ವ್ಯಾಪ್ತಿಯಲ್ಲಿ ಪೊಲೀಸರಿಂದ ಸಾಕ್ಷಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಭೀಮಾ ತೀರದ ಚಡಚಣ, ಕೆರೂರು, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ದಿನವಿಡೀ ಪೊಲೀಸರ ನಾನಾ ತಂಡಗಳು ಗಸ್ತು ತಿರುಗುತ್ತಿವೆ.