ಬದಿಯಡ್ಕ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಪೆರ್ಲದ ಯುವಕನೋರ್ವ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ನಡೆದಿದೆ. ಶೇಣಿ ಮಣಿಯಂಪಾರೆ ಮಣ್ಣಂಗಳದ ಜಾನು ನಾಯ್ಕ್ ರವರ ಪುತ್ರ ಎನ್. ಜೆ. ರೋಷನ್ (29) ಮೃತಪಟ್ಟವರು.
ಇಂಜಿನಿಯರಿಂಗ್ ಪದವಿ ಮುಗಿಸಿದ್ದ ರೋಷನ್ ಮನೆಯಲ್ಲಿಯೇ ವಿದೇಶ ಕಂಪೆನಿಯೊಂದಕ್ಕೆ ವರ್ಕ್ ಫ್ರಂ ಹೋಲ್ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ಮಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದಕ್ಕೆ ಇಂಟರ್ವ್ಯೂಗೆ ಕಾರಿನಲ್ಲಿ ತೆರಳಿದ್ದು, ಮರಳುವ ವೇಳೆ ಅಡ್ಕಸ್ಥಳದಲ್ಲಿ ಅಪಘಾತ ಸಂಭವಿಸಿದೆ.
ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದು ರೋಷನ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ಅಪಘಾತದಲ್ಲಿ ರೋಷನ್ ನ ಸಹೋದರಿ ರಾಜೇಶ್ವರಿ ಮೃತಪಟ್ಟಿದ್ದರು. ಮೃತರು ತಾಯಿ, ಪತ್ನಿ , ಪುಟ್ಟ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.