ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಚಿತ್ರದುರ್ಗ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್ ಅನ್ನು ನಿನ್ನೆ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್ ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಹೀಗಾಗಿ ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಎವಿಡೆನ್ಸ್ಗಳನ್ನ ಮುಂದಿಟ್ಟುಕೊಂಡು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ನಿನ್ನೆ ರಾತ್ರೋರಾತ್ರಿ ಪೊಲೀಸ್ ಅಧಿಕಾರಿಗಳು ದರ್ಶನ್ ಮನೆಯಲ್ಲಿ ಮಹಜರು ನಡೆಸಿದ್ದರು. ಇದೇ ವೇಳೆ A3 ಆರೋಪಿ ಪವನ್ ವಾಸವಿದ್ದ ರೂಂನಲ್ಲಿ ಬಟ್ಟೆ ಪತ್ತೆಯಾಗಿವೆ. ರೂಂನಲ್ಲಿ ಇಟ್ಟಿದ್ದ ಬಟ್ಟೆಯನ್ನು ಆರೋಪಿ ಪೊಲೀಸರಿಗೆ ತೋರಿಸಿದ್ದಾನೆ. ಆಗ ಪ್ಯಾಂಟ್, ಶರ್ಟ್ ಹಾಗೂ ಬಿಳಿ ಬಣ್ಣದ ಟವಲ್ ಮೇಲೆ ರಕ್ತದ ಗುರುತು ಪತ್ತೆಯಾಗಿವೆ. ಕೂಡಲೇ ಮಹಜರು ಪ್ರಕ್ರಿಯೆ ಮುಕ್ತಾಯಗೊಳಿಸಿ ಪ್ಯಾಂಟ್, ಶರ್ಟ್ ಹಾಗೂ ಬಿಳಿ ಬಣ್ಣದ ಟವಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು, ಕೊಲೆ ನಡೆದ ದಿನ ಆರೋಪಿ ನಂದೀಶ್ ಧರಿಸಿದ್ದ ಶೂ ಅನ್ನು ದರ್ಶನ್ ಮನೆಯಲ್ಲಿ ಬಿಟ್ಟಿದ್ದನಂತೆ. ಸದ್ಯ ಆರೋಪಿ ನಂದೀಶ್ ಶೂ ಮತ್ತು ಬಟ್ಟೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಬಳಿಕ ಆರ್ಆರ್ ನಗರದಲ್ಲಿರೋ ನಂದೀಶನ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೂವರು ಆರೋಪಿಗಳಾದ ನಾಗರಾಜ್, ದೀಪಕ್, ನಂದೀಶ್ನನ್ನು ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ಈ ಕೇಸ್ಗೆ ಸಂಬಂಧಪಟ್ಟಂತೆ ಕೆಲವು ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ .