ಹುಲಿ ಉಗುರಿನ ಲಾಕೆಟ್ ಧರಿಸಿದ ಆರೋಪದಲ್ಲಿ ನಿನ್ನೆ ರಾತ್ರಿ ಬಿಗ್ಬಾಸ್ ಮನೆಯಿಂದಲೇ ಬಂಧನಕ್ಕೋಳಗಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅರಣ್ಯ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಎಸಿಜೆಎಂ ನ್ಯಾಯಧೀಶರು ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಬ್ಬದ ಹಿನ್ನೆಲೆ ಎರಡು ದಿನ ಕೋರ್ಟ್ ರಜೆ ಇದ್ದ ಕಾರಣ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೊಯ್ದು ಸಂತೋಷ್ರನ್ನು ಹಾಜರು ಪಡಿಸಲಾಯ್ತು.
ನ್ಯಾಯಾಂಗ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಜಾಮೀನು ಅರ್ಜಿ ಹಾಕಿದ್ದೀವಿ. ಬುಧವಾರ ವಿಚಾರಣೆ ಇದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತನಿಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಬಂಧಿಸಿದ್ದಾರೆ. ಈಗ ಹುಲಿದು ಅಂತಾ ಹೇಳ್ತಿದ್ದಾರೆ. ಎಕ್ಸ್ಫರ್ಟ್ ಪರಿಶೀಲನೆ ನಡೆಸಿ ವರದಿ ಬಂದ ಬಳಿಕ ಗೊತ್ತಾಗಲಿದೆ.
ನೆನ್ನೆ ರಾತ್ರಿಯಿಂದಲೇ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ತನ್ನಲ್ಲಿರುವ ಹುಲಿ ಉಗುರು ಬಂದಿದ್ದು ಹೇಗೆ? ಯಾರು ಕೊಟ್ಟರು? ಎಲ್ಲಿಂದ ಖರೀದಿ ಮಾಡಿದಿದ್ದೀರಿ? ಮಾರಿದವರು ಈಗ ಎಲ್ಲಿದ್ದಾರೆ? ಎಷ್ಟು ಮಂದಿಗೆ ಈ ರೀತಿ ಉಗುರು ಮಾರಲಾಗಿದೆ ಹೀಗೆ ಇತ್ಯಾದಿ ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳು ಸಂತೋಷ್ ಮುಂದೆ ಇಟ್ಟಿದ್ದರು. ಅದಕ್ಕೆ ಸಂತೋಷ್ ಕೂಡ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.
ಕೆಲವು ವರ್ಷಗಳ ಹಿಂದೆ ಅಪರಿಚಿತರು ಹುಲಿ ಉಗುರನ್ನು ಮಾರಕ್ಕೆ ತಂದಿದ್ದರು. ಅವರು ಎಲ್ಲಿಂದ ಬಂದಿದ್ದರು, ಯಾರು ಎನ್ನುವುದು ನನಗೆ ಗೊತ್ತಿಲ್ಲ. ಮಾರಾಟ ಮಾಡುತ್ತಿರುವ ವಿಷಯ ಗೆಳೆಯರಿಂದ ತಿಳಿಯಿತು. ಹಣ ಕೊಟ್ಟು ಇದನ್ನು ಖರೀದಿ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಸಂತೋಷ್ ಹೇಳಿದ್ದಾರೆ ಎನ್ನುವುದು ಸಿಕ್ಕಿರುವ ಪ್ರಾಥಮಿಕ ಮಾಹಿತಿ.
ಸದ್ಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವರ್ತೂರು ಸಂತೋಷ್ ಅವರನ್ನು ಪರಪ್ಪನ ಅಗ್ರಹಾರಕ್ಕೆ ರವಾನೆ ಮಾಡಲಾಗಿದೆ. ಕಿರುತೆರೆ ಇತಿಹಾಸದಲ್ಲಿ ಜನಪ್ರಿಯ ಶೋ ಆಗಿರುವ ಬಿಗ್ಬಾಸ್ ನಲ್ಲಿ ವರ್ತೂರು ಸಂತೋಷ್ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು 2 ವಾರಗಳಷ್ಟೇ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಬಂಧನವಾಗಿದ್ದು, ಈ ರೀತಿ ಆಗಿರುವುದು ಬಿಗ್ಬಾಸ್ ಇತಿಹಾಸದಲ್ಲೇ ಮೊದಲಾಗಿದೆ.