ಮೈಸೂರು: ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಬಳಿ ನಡೆದಿದೆ.
ಇಂದು ನಸುಕಿನ ಜಾವ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಪಲ್ಸರ್ ಹಾಗೂ ಡಿಯೋ ಬೈಕ್ ನಡುವೆ ಅಪಘಾತವಾಗಿದೆ. ಮೃತರನ್ನು ಇಲವಾಲ ಗ್ರಾಮದ ರಾಮಚಂದ್ರ (22) ಮತ್ತು ನವೀನ್ (24) ಎಂದು ಗುರುತಿಸಲಾಗಿದೆ.
ಪಲ್ಸರ್ ಬೈಕಿನಲ್ಲಿ ರಾಮಚಂದ್ರ ಮತ್ತು ನವೀನ್ ಹೋಗುತ್ತಿದ್ದರು. ಇನ್ನೂ ಡಿಯೋ ಬೈಕಿನಲ್ಲಿ ಗಿರೀಶ್ ಮತ್ತು ಕೃಷ್ಣ ಮೈಸೂರಿಗೆ ಬರುತ್ತಿದ್ದರು. ಆದರೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಬಳಿ ವೇಗವಾಗಿ ಬಂದು ಎರಡು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿವೆ.
ಪರಿಣಾಮ ಪಲ್ಸರ್ ಬೈಕಿನಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಇನ್ನೂ ಅಪಘಾತದಲ್ಲಿ ಕೊಮ್ಮೆಗೌಡ ಕೊಪ್ಪಲು ಗ್ರಾಮದ ಗಿರೀಶ್ ಹಾಗೂ ಕೃಷ್ಣಗೆ ಗಂಭೀರವಾಗಿ ಗಾಯವಾಗಿದ್ದು, ಇಬ್ಬರನ್ನೂ ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.