ಉಳ್ಳಾಲ, ಡಿ.26: ಇಂದು ನಸುಕಿನ ವೇಳೆ ಬೈಕ್ ಮತ್ತು ಆ್ಯಕ್ಟಿವಾ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟು ಕೆರೆಬೈಲಿನ ಕೊರಗಜ್ಜನ ಕಟ್ಟೆಯ ಎದುರು ನಡೆದಿದೆ.
ಸಂತೋಷ್ ನಗರ ನಿವಾಸಿ ಸಂದೇಶ್ ಪೂಜಾರಿ(31) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಕಣೀರ್ ತೋಟದ ಜಾತ್ರೆ ನೋಡಲು ತೆರಳಿದ್ದ ಸಂದೇಶ್ ಅವರು ಇಂದು ಮುಂಜಾನೆ ಪಲ್ಸರ್ ಬೈಕಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ಕೆರೆಬೈಲಿನ ಕೊರಗಜ್ಜನ ಕಟ್ಟೆಯ ಬಳಿ ಮಂಗಳೂರಿಗೆ ಧಾವಿಸುತ್ತಿದ್ದ ಆಕ್ಟಿವಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಸಂದೇಶ್ ರಸ್ತೆಗೆಸೆಯಲ್ಪಟ್ಟಿದ್ದು ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕ್ಟಿವಾ ಸವಾರನೂ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದನೆನ್ನಲಾಗಿದೆ.
ಸಂತೋಷ್ ನಗರದ ಶೇಖರ ಮತ್ತು ಲೀಲಾವತಿ ಅವರ ಹಿರಿಯ ಮಗನಾದ ಸಂದೇಶ್ ಮೂಲತಃ ಪೈಂಟರ್ ಆಗಿದ್ದು ಲಾಕ್ ಡೌನ್ ನಂತರ ತೊಕ್ಕೊಟ್ಟಿನ ಓವರ್ ಬ್ರಿಡ್ಜ್ ನಲ್ಲಿ ಸ್ನೇಹಿತ ಅಕ್ಷಯ್ ಜೊತೆ ಟೆಂಪೋದಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದರು. ನಿನ್ನೆ ರಾತ್ರಿ ಸ್ನೇಹಿತ ಅಕ್ಷಯ್ ಜೊತೆ ಕೊಲ್ಯ ಕಣೀರು ತೋಟದ ವಲಸರಿ ಜಾತ್ರೆಗೆ ಸಂದೇಶ್ ತೆರಳಿದ್ದರು. ಅಕ್ಷಯ್ ಬೇಗ ಮನೆಗೆ ಹಿಂದಿರುಗಿದ್ದು, ಸಂದೇಶ್ ಮುಂಜಾನೆ ವೇಳೆಗೆ ಮನೆಗೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.