ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಬಿಡುಗಡೆ ಆಗಿರುವ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 20 ಮಂದಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಈ ಬಾರಿ ಹಾಲಿ ಸಂಸದರಿಗೆ ಶಾಕ್ ಉಂಟಾಗಿದ್ದು ಹೊಸಬರಿಗೆ ಲಕ್ ಖುಲಾಯಿಸಿದೆ.
ಬಿಜೆಪಿ ಎರಡನೇ ಪಟ್ಟಿ ರಿಲೀಸ್ ಮಾಡಿದ ನಂತರ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿದ್ದು, ದಕ್ಷಿಣಕನ್ನಡ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಗೊಂಡ ಕ್ಯಾ| ಬ್ರಿಜೇಶ್ ಚೌಟರವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಯುವಕರಿಗೆ ಮನೆ ಹಾಕುವ ಮೂಲಕ ವರಿಷ್ಟರು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಕಳೆದ ಹದಿನೈದು ವರ್ಷಗಳಲ್ಲಿ ಭಾರತೀಯ ಜನತಾಪಾರ್ಟಿ ನನಗೆ ದೊಡ್ಡ ಅವಕಾಶ ಕೊಟ್ಟಿದೆ. ಪಾರ್ಟಿಯ ಹಿರಿಯರು ಗುರುತಿಸಿ ಅವಕಾಶಗಳನ್ನು ಕೊಟ್ಟಿದ್ದಾರೆ ಮತ್ತು ಕಾರ್ಯಕರ್ತರು ಹಗಲುರಾತ್ರಿ ದುಡಿದು ನನ್ನನ್ನು ಗೆಲ್ಲಿಸಿದ್ದಾರೆ, ನನಗೆ ಸಹಕಾರ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಅಭ್ಯರ್ಥಿ ಪರ ಓಡಾಟ ಮಾಡುತ್ತೇನೆ ಎಂದು ಹೇಳಿದರು.ನನಗೆ ಕೊಟ್ಟ ಸಹಕಾರ ಕ್ಯಾ.ಬ್ರಿಜೇಶ್ ಚೌಟಾಗೆ ಕೊಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ನಳಿನ್ ಕುಮಾರ್ ಕಟೀಲು ಮನವಿ ಮಾಡಿದ್ದಾರೆ.