ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ದುಷ್ಕರ್ಮಿಗಳು ವಂಚಿಸಿದ್ದಾರೆ. ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ವಕ್ತಾರ ವಿನೋದ್ ಕೃಷ್ಣಮೂರ್ತಿ ಅವರು ಕೇಂದ್ರ ಸೆನ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತೋಷ್ ಅವರ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಖಾತೆ ತೆರೆದಿದ್ದರು. ಸಂತೋಷ್ ಅವರ ಮೂಲ ಖಾತೆಯಲ್ಲಿ ಸ್ನೇಹಿತರಾಗಿದ್ದ ಕೆಲವರಿಗೆ ವಿನಂತಿ (ಫ್ರೆಂಡ್ ರಿಕ್ವೆಸ್ಟ್) ಕಳುಹಿಸಿದ್ದರು. ನ.30ರಂದು ತುರ್ತು ಕಾರಣಕ್ಕಾಗಿ ಹಣ ಕಳುಹಿಸುವಂತೆಕೆಲವರಿಗೆ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿದ್ದರು.
ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಅಜಿತ್ ಶೆಟ್ಟಿ ಕಿರಾಡಿ ಎಂಬುವರಿಗೆ ಮೊಬೈಲ್ ಸಂಖ್ಯೆಯೊಂದನ್ನು ರವಾನಿಸಿ, ಆನ್ಲೈನ್ ಮೂಲಕ ಹಣ ಸಂದಾಯ ಮಾಡುವಂತೆ ಹೇಳಿದ್ದಾರೆ. ಸಂತೋಷ್ ಅವರೇ ಹಣ ಕೇಳಿದ್ದಾರೆ ಎಂದು ಭಾವಿಸಿದ್ದ ಕಿರಾಡಿ, ₹15 ಸಾವಿರ ಕಳುಹಿಸಿದ್ದರು. ಕೂಡಲೇ ಈ ನಕಲಿ ಖಾತೆ ವಂಚನೆ ಕುರಿತು ಎಲ್ಲರನ್ನೂ ಎಚ್ಚರಿಸಲಾಯಿತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಲವರು ಸುಲಭವಾಗಿ ಹಣ ಸಂಪಾದಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆಗಳ ಮೂಲಕ ವಂಚಿಸುವ ಮಾರ್ಗ ಕಂಡುಕೊಂಡಿದ್ದಾರೆ. ಐಪಿಸಿ ಸೆಕ್ಷನ್ (ವಂಚನೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಂಚನೆ ಎಸಗಿರುವ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.