ಇಡ್ಕಿದು: ಮಿತ್ತೂರು ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನ ಬೀಡಿನಮಜಲು ದೇವಸ್ಥಾನದ ಅಭಿವೃದ್ದಿ ಹಾಗೂ ಸಾನಿಧ್ಯ ವೃದ್ದಿಗಾಗಿನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಶ್ರೀ ಕ್ಷೇತ್ರದಲ್ಲಿ ಗ್ರಾಮ ಬಂಧುಗಳೆಲ್ಲರೂ ಸೇರಿ ಪ್ರಾರ್ಥಿಸಿ ಮುಷ್ಠಿಕಾಣಿಕೆ ಸಮರ್ಪಿಸುವ ಕಾರ್ಯಕ್ರಮವು ನ.14 ರಂದು ಬೆಳಿಗ್ಗೆ 9 ಕ್ಕೆ ನಡೆಯಲಿದೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಬೀಡಿನಮಜಲು ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನವು ಬಹಳ ಪುರಾತನ ಕ್ಷೇತ್ರವಾಗಿದೆ. 20 ವರ್ಷಗಳ ಹಿಂದೆ ದೇವಸ್ಥಾನವು ಜೀರ್ಣೋದ್ದಾರಗೊಂಡು ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಾ ಬರುತ್ತಿದೆ. ವಿಟ್ಲ ಡೊಂಬ ಅರಸರ ಕಾಲದಲ್ಲಿ ಅರಮನೆಯ ಪವಿತ್ರಪಾಣಿಗಳಾಗಿದ್ದ ಕೇಳತ್ತಾಯ ಮನೆಯವರು ಇಲ್ಲಿ ಪೂಜಾ ಕಾರ್ಯ ನಡೆಸುತ್ತಿದ್ದರು. ವಿಟ್ಲ ಅರಮನೆಯ ಪಟ್ಟಾಭಿಷೇಕದ ಸಮಯದಲ್ಲಿ ಇಲ್ಲಿ ಪಟ್ಟದ ಕತ್ತಿಯ ಮೊದಲ ಪೂಜೆ ನಡೆದು ನಂತರ ಪಟ್ಟಾಭಿಷೇಕ ನಡೆಯುತ್ತಿತ್ತು ಎಂಬ ಪ್ರತೀತಿ ಇದೆ. ಇಲ್ಲಿ ಆದಿಪರಾಶಕ್ತಿಯ ದರ್ಪಣ ಬಿಂಬದ ರೂಪದಲ್ಲಿ ಆರಾಧಿಸುತ್ತಿದ್ದ ನವರಾತ್ರಿಯ 9 ದಿನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ.
ಪ್ರಶ್ನಾಚಿಂತನೆಯ ಪ್ರಕಾರ ದೇವಸ್ಥಾನದ ಹೊರಾಂಗಣದ ಛಾವಣಿಯನ್ನು ವಾಸ್ತು ತಜ್ಞರ ಸಲಹೆಯಂತೆ ಬದಲಾಯಿಸಿ ವಿವಿಧ ಪರಿಹಾರ ಕಾರ್ಯಗಳನ್ನು ನಡೆಸಿ ಆ ನಂತರದಲ್ಲಿ ದೇವರ ಬಿಂಬಕ್ಕೆ ಕಲಾಶಾಧಿಗಳನ್ನು ನಡೆಸುವಂತೆ ಸಲಹೆ ನೀಡಿರುತ್ತಾರೆ. ಈ ಪ್ರಕಾರ ಕೆಲವೊಂದು ಪರಿಹಾರ ಕಾರ್ಯಗಳು ನವರಾತ್ರಿಗೆ ಮುಂಚಿತವಾಗಿ ನಡೆಸಲಾಗಿದೆ. ಗ್ರಾಮದ ಭಕ್ತಾಧಿಗಳಿಂದ ಮುಷ್ಟಿಕಾಣಿಕೆ ಸಂಗ್ರಹಿಸಿ ಶಕ್ತಿಪೀಠವಾದ ಕೊಲ್ಲೂರು ಕ್ಷೇತ್ರಕ್ಕೆ ಸಮರ್ಪಿಸಿ ಪ್ರಾರ್ಥಿಸಿ ಬರುವಂತೆ ತಿಳಿಸಿರುತ್ತಾರೆ. ಭಕ್ತ ಅನುಕೂಲಕ್ಕಾಗಿ ಪಾಕಶಾಲೆ ಹಾಗೂ ಸಭಾಂಗಣದ ಅವಶ್ಯಕತೆ ಮನಗಂಡು ಇದರ ನಿರ್ಮಾಣಕ್ಕೆ ತೊಡಗಿಸಿಕೊಂಡಿದ್ದು ಸುಮಾರು 30 ಲಕ್ಷ ವೆಚ್ಚದ ಅಂದಾಜು ಪಟ್ಟಿಯೊಂದಿಗೆ ಕೆಲಸಗಳನ್ನು ಪ್ರಾರಂಭಿಸಿದ್ದಾರೆ.