ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಇದಾದ ಎರಡು ದಿನಗಳ ಬಳಿಕ ಯುವಕನ ಮೃತದೇಹ ನೆಲಮಂಗಲದ ಚಿಕ್ಕಚಿಕ್ಕನಹಳ್ಳಿ ಬಳಿ ಪತ್ತೆಯಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು.
ಡಿಪ್ಲೋಮಾದಲ್ಲಿ ಇಂಜಿನಿಯರಿಂಗ್ ಮಾಡಿದ್ದ ದಾವಣಗೆರೆ ಮೂಲದ ಯುವಕ ಲೋಕೇಶ್ ಎಂಬವರು ಪೀಣ್ಯ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಅಕ್ಟೋಬರ್ 5 ರಂದು ಕಚೇರಿ ಕೆಲಸ ಮುಗಿಸಿ ನಾಗಸಂದ್ರ ಬಳಿ ಬರುತ್ತಿದ್ದ ಲೋಕೇಶ್, ಇನ್ನೇನು ಮನೆಗೆ ತಲುಪುವ ವೇಳೆ ಕಿಡ್ನಾಪ್ ಆಗಿದ್ದಾರೆ.
ಇತ್ತ, ಮಗ ಮನೆಗೆ ಬಾರದ್ದನ್ನು ನೋಡಿ ಗಾಬರಿಗೊಂಡ ಪೋಷಕರು, ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಾರಿಯಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಿಡ್ನಾಪ್ ಆಗಿರುವುದು ತಿಳಿದು ಬಂದಿದೆ.
ಇಬ್ಬರು ವ್ಯಕ್ತಿಗಳು ಲೋಕೇಶ್ ಅವರನ್ನು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹೆದ್ದಾರಿ ಪಕ್ಕದಲ್ಲಿ ಬಲವಂತವಾಗಿ ಬೈಕ್ನಲ್ಲಿ ಕೂರಿಸಿ ಕಿಡ್ನಾಪ್ ಮಾಡಿದ್ದಾರೆ. ಅಕ್ಟೋಬರ್ 5 ರಂದು ಕಿಡ್ನಾಪ್ ಮಾಡಲಾಗಿದ್ದು, 8 ರಂದು ನೆಲಮಂಗಲದ ಚಿಕ್ಕಕುಕ್ಕನಹಳ್ಳಿ ಬಳಿ ಮೃತದೇಹ ಪತ್ತೆಯಾಗಿದೆ.
ಸದ್ಯ, ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಠಾಣಾ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.