ದಂಪತಿ ಗೃಹ ಪ್ರವೇಶ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತಪಟ್ಟವರು ವಿಜಯನಗರದ ಹೊಸಹಳ್ಳಿ ಮೂಲದ ನಿರ್ಮಲಾ ಹಾಗೂ ಬೈಯಣ್ಣ ಎಂದು ಗುರುತಿಸಲಾಗಿದೆ.
ಕಳೆದ 23 ವರ್ಷಗಳ ವೈವಾಹಿಕ ಜೀವನದ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಇದೀಗ ಸಾವಲ್ಲೂ ಜೊತೆಯಾಗಿದ್ದಾರೆ. ಹಾರಗದ್ದೆಯಲ್ಲಿ ಸಂಬಂಧಿಕರೊಬ್ಬರ ಗೃಹ ಪ್ರವೇಶ ಮುಗಿಸಿ ಹಿಂತಿರುಗುವಾಗ ನೈಸ್ ರಸ್ತೆಯ ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಇವರ ಬೈಕ್ಗೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಅತಿವೇಗವಾಗಿ ಕ್ಯಾಂಟರ್ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದಿದ್ದ ಚಾಲಕ. ಬೈಕ್ನಲ್ಲಿದ್ದ ದಂಪತಿ ಹಾರಿ ನೆಲಕ್ಕೆ ಅಪ್ಪಳಿಸಿದೆ. ಬೈಯಣ್ಣಗೆ ತಲೆಗೆ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಪತ್ನಿಯೂ ಕೂಡ ಬೋರಲಾಗಿ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಹಿಂದೆ ಕೂಡ ಎರಡು ಬಾರಿ ಬೈಯ್ಯಣ್ಣ ಅಪಘಾತಕ್ಕೊಳಗಾಗಿದ್ದರು ಎನ್ನಲಾಗಿದೆ. ಬೈಯ್ಯಣ್ಣ ಹಿಂದೆ ಎರಡು ಬಾರಿಯೂ ಗಂಭೀರ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಒಮ್ಮೆ ಕನಕಪುರ ರಸ್ತೆ, ಮತ್ತೊಮ್ಮೆ ವಿಜಯನಗರದಲ್ಲಿ ಅಪಘಾತವಾಗಿತ್ತು. 3ನೇ ಬಾರಿ ಆಕ್ಸಿಡೆಂಟ್ ಆಗಿ ಪತ್ನಿಯೊಂದಿಗೆ ಕೊನೆಯುಸಿರೆಳೆದಿದ್ದಾರೆ.ಆಕ್ಸಿಡೆಂಟ್ ಆದ ಬಳಿಕ ಚಾಲಕ ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.