ಬೆಂಗಳೂರು: ಸಾಕು ನಾಯಿಯನ್ನು ಬೀದಿ ನಾಯಿ ಕಚ್ಚಿತೆಂದು ಬೀದಿ ನಾಯಿಯನ್ನು ಅಮಾನವೀಯವಾಗಿ ಹೊಡೆದು ಕೊಂದಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಿಂತಲ ಮಡಿವಾಳ ಗ್ರಾಮದ ಬಳಿ ನಡೆದಿದೆ. ಚಿಂತಲ ಮಡಿವಾಳ ನಿವಾಸಿ ಚಂದ್ರಪ್ಪ ಬೀದಿ ನಾಯಿಯನ್ನು ಬಡಿದು ಕೊಂದ ಕ್ರೂರಿ ವ್ಯಕ್ತಿ.
ಚಿಂತಲ ಮಡಿವಾಳ ನಿವಾಸಿ ಚಂದ್ರಪ್ಪ ತನ್ನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದ ಸಮಯದಲ್ಲಿ ಬೀದಿ ನಾಯಿಯೊಂದು ಕಚ್ಚಿದೆ. ಜೊತೆಗೆ ಮನೆಯ ತನಕ ಹಿಂಬಾಲಿಸಿಕೊಂಡು ಬಂದಿದೆ. ಸಾಕು ನಾಯಿ ಮಾಲೀಕ ಮೊದಲೇ ಕಂಠ ಪೂರ್ತಿ ಮದ್ಯಪಾನ ಮಾಡಿದ್ದು, ತನ್ನ ಸಾಕು ನಾಯಿಯನ್ನು ಕಚ್ಚಿದ್ದು ಮಾತ್ರವಲ್ಲದೆ ಹಿಂಬಾಲಿಸಿಕೊAಡು ಮನೆಯವರೆಗೂ ಬೇರೆ ಬಂದಿದ್ದಿಯಾ ಎಂದು ರಾಡ್ ನಿಂದ ಬೀದಿ ನಾಯಿಯ ತಲೆ ಸೀಳಿ ಹೋಗುವಂತೆ ಹೊಡೆದು ಕೊಂದಿದ್ದಾನೆ.
ಸಾಲದಕ್ಕೆ ನಾಯಿಯನ್ನು ದರ ದರ ಎಂದು ಎಳೆದು ತಂದು ರಸ್ತೆ ಬದಿ ಎಸೆದಿದ್ದಾನೆ. ಈ ವೇಳೆ ಪಾದಚಾರಿಯೊಬ್ಬರು ಪ್ರಶ್ನಿಸಿದ್ದಕ್ಕೆ ನಾನು 23,000 ಕೊಟ್ಟು ಸಾಕಾಲು ನಾಯಿಯನ್ನು ತಂದಿದ್ದೇನೆ. ನನಗೆ ಊಟವಿಲ್ಲದಿದ್ದರೂ ನಾಯಿಗೆ ಊಟ ಹಾಕಿ ಸಾಕುತ್ತಿದ್ದೆ. ಅಂತಹ ನಾಯಿಯನ್ನು ಕಚ್ಚಿದರೆ ಸುಮ್ಮನೆ ಬಿಡಬೇಕಾ..? ಅದಕ್ಕೆ ಹೊಡೆದು ಹಾಕಿದ್ದಿನಿ. ಮೊಬೈಲ್ನಲ್ಲಿ ವಿಡಿಯೋ ಅಲ್ಲ ಏನು ಬೇಕಾದರೂ ಮಾಡಿಕೋ ಹೋಗು ಎಂದು ಅವಾಜ್ ಹಾಕಿ ಹೋಗಿದ್ದಾನೆ .
ಕ್ಷುಲ್ಲಕ ಕಾರಣಕ್ಕಾಗಿ ಬೀದಿ ನಾಯಿಯನ್ನು ಕೊಂದ ವಿಚಾರ ನಗರದ ಯಲಹಂಕ ಪ್ರಾಣಿ ದಯಾ ಸಂಘದ ಅನಿರುದ್ದ್ರವರ ಗಮನಕ್ಕೆ ಬಂದಿದೆ. ಕೂಡಲೇ ಬೀದಿ ನಾಯಿಯನ್ನು ಅಮಾನುಷವಾಗಿ ಕೊಂದ ಚಂದ್ರಪ್ಪನ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿದ್ದ ನಾಯಿಯ ಮೃತ ದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾರೆ.
ದೂರು ದಾಖಲಿಸಿಕೊಂಡಿದ್ದ ಹೆಬ್ಬಗೋಡಿ ಪೋಲಿಸರು ಆರೋಪಿ ಚಂದ್ರಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಚಂದ್ರಪ್ಪನಿಗೆ ಖಡಕ್ ವಾರ್ನಿಂಗ್ ನೀಡಿರುವ ಹೆಬ್ಬಗೋಡಿ ಪೊಲೀಸರು ಮತ್ತೊಮ್ಮೆ ಇಂತಹ ನೀಚ ಕೃತ್ಯ ನಡೆಸಿದರೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಠಾಣಾ ಬೇಲ್ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಆದರೆ ದೂರು ದಾಖಲಿಸಿರುವ ಯಲಹಂಕ ಪ್ರಾಣಿ ದಯಾ ಸಂಘದ ಅನಿರುಧ್ ಮಾತ್ರ ಆರೋಪಿ ಚಂದ್ರಪ್ಪನಿಗೆ ಶಿಕ್ಷೆ ಆಗುವವರೆಗೂ ಕಾನೂನು ಹೋರಾಟ ನಡೆಸುತ್ತೇನೆ. ಅಮಾಯಕ ಬೀದಿ ನಾಯಿಯನ್ನು ಕೊಲ್ಲುವುದು ಮನುಷ್ಯನನ್ನು ಕೊಂದಷ್ಟೆ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .