ಚೆನ್ನೈ: ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅವರು ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಆದರೆ ರಾಜಕೀಯ ಜೀವನದ ಚೊಚ್ಚಲ ಚುನಾವಣೆಯಲ್ಲಿಯೇ ಅಣ್ಣಾಮಲೈ ಸೋಲನುಭವಿಸಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ, ಸೋಲು ಜೀವನದ ಒಂದು ಭಾಗ. ಹಿಂದೆಯೂ ಇಂತಹ ಹಲವು ಸೋಲುಗಳನ್ನು ಕಂಡಿದ್ದೇನೆ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಸೋಲುಗಳು ಜೀವನದ ಒಂದು ಭಾಗವಾಗಿದ್ದು, ಇಂತಹ ಹಲವು ಸೋಲುಗಳನ್ನು ನೋಡಿದ್ದೇನೆ. ಗೆಲುವಿನ ನಿರೀಕ್ಷೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ’ ಎಂದು ಅಣ್ಣಾಮಲೈ ಹೇಳಿದ್ದಾರೆ.
ಅರಾವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ನನಗೆ 68 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ ಮತದಾರರಿಗೆ ನನ್ನ ಧನ್ಯವಾದಗಳು. ನನ್ನ ಪರವಾಗಿ ಶ್ರಮಿಸಿದ ಪಕ್ಷದ ಹಿರಿಯರಿಗೂ, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವುದಾಗಿ ಅಣ್ಣಾಮಲೈ ತಿಳಿಸಿದ್ದಾರೆ.
ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಅವರು ನಂತರ ತಮಿಳುನಾಡಿನಲ್ಲಿ ನೆಲೆಸಿದ್ದರು. ನಂತರ ಬಿಜೆಪಿ ಪಕ್ಷಕ್ಕೆ ಸೇರಿದ್ದ ಅವರು ತಮ್ಮ ಹುಟ್ಟೂರು ಅರಾವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.