ಚೆನ್ನೈ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಅನಂತಮಂಗಳಂನಲ್ಲಿರುವ ಪುರಾತನ ರಾಜಗೋಪಾಲಸ್ವಾಮಿ ದೇವಾಲಯದಲ್ಲಿ 42 ವರ್ಷಗಳ ಹಿಂದೆ ಕಳ್ಳತನವಾಗಿದ್ದ ತನ್ನ ಮೂರು ವಿಗ್ರಹಗಳನ್ನ ವಾಪಸ್ ಪಡೆದಿದೆ.
15ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ, ರಾಮ-ಸೀತೆ, ಲಕ್ಷ್ಮಣ, ಹನುಮಂತನ ನಾಲ್ಕು ಕಂಚಿನ ವಿಗ್ರಹಗಳನ್ನ 1978ರಲ್ಲಿ ಕಳ್ಳತನ ಮಾಡಲಾಗಿತ್ತು. ಇಲ್ಲಿನ ಪೊರಾಯರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರನ್ನ ಅರೆಸ್ಟ್ ಕೂಡ ಮಾಡಿದ್ದರು. ಆದರೆ ವಿಗ್ರಹಗಳು ಸಿಕ್ಕಿರಲಿಲ್ಲ.
ಬಳಿಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲಾಕೃತಿಗಳ ಮಾರಾಟದ ಬಗ್ಗೆ ಮಾನಿಟರ್ ಮಾಡುವ ಸಿಂಗಾಪುರ ಮೂಲದ ಸಂಸ್ಥೆಯೊಂದು ವಿಗ್ರಹಗಳ ಬಗ್ಗೆ ಮಾಹಿತಿ ನೀಡಿತ್ತು. ಇದರ ಬೆನ್ನತ್ತಿ ಹೋದಾಗ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಲಂಡನ್ನ ಪುರಾತನ ವಸ್ತು ಸಂಗ್ರಾಹಕರೊಬ್ಬರ ಬಳಿ ನಾಲ್ಕರಲ್ಲಿ ಮೂರು ವಿಗ್ರಹಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಲಂಡನ್ನ ಮೆಟ್ರೊಪಾಲಿಟನ್ ಪೊಲೀಸರು ವಿಗ್ರಹಗಳನ್ನ(ರಾಮ, ಲಕ್ಷ್ಮಣ, ಸೀತೆಯ ವಿಗ್ರಹ) ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಿದ್ದರು.
ಭಾರತಕ್ಕೆ ಬಂದ ವಿಗ್ರಹಗಳನ್ನ ಕೇಂದ್ರ ಸಂಸ್ಕೃತಿ ಸಚಿವಾಲಯ ಕಳೆದ ವಾರ ತಮಿಳುನಾಡು ಸರ್ಕಾರಕ್ಕೆ ನೀಡಿತ್ತು. ಬಳಿಕ ಸಿಎಂ ಪಳನಿಸ್ವಾಮಿ ಪರಿಶೀಲನೆ ನಡೆಸಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂಕೇಶ್ವರಿ ಅವರಿಗೆ ಹಸ್ತಾಂತರ ಮಾಡಿದರು. ನಿನ್ನೆ ಚೆನ್ನೈನಿಂದ ರಾಜಗೋಪಾಲಸ್ವಾಮಿ ದೇವಾಲಯಕ್ಕೆ ವಿಗ್ರಹಗಳನ್ನ ತರಲಾಗಿದೆ.