ಆಲ್ದುರು : ಕಾರಿನಲ್ಲಿ ಖೋಟ ನೋಟುಗಳನ್ನ ಸಾಗಿಸುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ಸಂತೋಷ್ ಹಾಗೂ ಮಂಗಳೂರು ಸುರತ್ಕಲ್ ನಿವಾಸಿ ನಜೀರ್ ನನ್ನು ಅಲ್ದೂರು ಪೊಲೀಸರು ಬಂಧಿಸಿದ್ದು ಜೊತೆಯಲ್ಲಿ ಮತ್ತೊಂದು ಬೆಂಗಾವಲು ಕಾರಿನಲ್ಲಿ ಬರುತ್ತಿದ್ದ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಇನ್ನೂ ಖೋಟಾ ನೋಟು ಹಣ ಬೆಳ್ತಂಗಡಿಯಿಂದ ಚಿಕ್ಕಮಗಳೂರಿಗೆ ಸಾಗಾಟಕ್ಕೆ ಉಜಿರೆಯ ರಾಧಕೃಷ್ಣ ಭಂಡಾರಿಯ ಎಂಬವರ ಅಲ್ಟೋ ಕಾರನ್ನು ಆರೋಪಿಗಳು ಬಳಕ್ಕೆ ಮಾಡಿದ್ದು ಆ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಟೋ ಕಾರಿನ ಜೊತೆ ಬೆಂಗಾವಲಾಗಿ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ವಿಟ್ಲ ನಿವಾಸಿ ಜುಬೇದ್ ಹಾಗೂ ರಿಯಾಜ್ ಪರಾರಿಯಾಗಿದ್ದು ಅವರಿಗಾಗಿ ಅಲ್ದೂರು ಪೊಲೀಸರು ಬಲೆ ಬೀಸಿದ್ದಾರೆ.
ಈ ಪ್ರಕರಣದಲ್ಲಿ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆ ಪ್ರಾಥಮಿಕ ತನಿಖೆ ವೇಳೆ ಸಿಕ್ಕಿದೆ. ಹಲವು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಆ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ಅಲ್ದೂರು ಪೊಲೀಸರು ಮುಂದುವರಿಸಿದ್ದಾರೆ.
ಬಂಧಿತ ಆರೋಪಿ ಸಂತೋಷ್ ಈ ಹಿಂದೆ ಚೈನ್ ಲಿಂಕ್ ಮೂಲಕ ಬಿಟ್ ಕಾಯಿನ್ ದಂಧೆ ಮಾಡಿ ಲಕ್ಷಾಂತರ ಹಣ ಮೋಸ ಮಾಡಿದ್ದಾನೆ ಎಂದು ವರದಿಯಾಗಿದೆ.