

ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದ, ‘ಲೂಸ್ ಮಾದ’ ಯೋಗಿ, ದಿಗಂತ್ ನಟನೆಯ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಕಾಪಿ ರೈಟ್ ಉಲ್ಲಂಘನೆ ಆಗಿದೆ ಎಂದು ಇತ್ತೀಚೆಗೆ ದೂರು ದಾಖಲಾಗಿತ್ತು. ‘ನ್ಯಾಯ ಎಲ್ಲಿದೆ’ ಮತ್ತು ‘ಗಾಳಿಮಾತು’ ಸಿನಿಮಾಗಳ ಹಾಡುಗಳನ್ನು ಅನುಮತಿ ಇಲ್ಲದೇ ಬಳಕೆ ಮಾಡಿದ್ದಾರೆ ಎಂಆರ್ಟಿ ಮ್ಯೂಸಿಕ್ ಸಂಸ್ಥೆಯು ರಕ್ಷಿತ್ ಶೆಟ್ಟಿ ವಿರುದ್ಧ ದೂರು ಸಲ್ಲಿಸಿತ್ತು. ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ನಿನ್ನೆ (ಆಗಸ್ಟ್ 2) ನಟ ರಕ್ಷಿತ್ ಶೆಟ್ಟಿ ಯಶವಂತಪುರ ಪೊಲೀಸ್ ಠಾಣೆಗೆ ಹಾಜರಾಗಿ, ತಮ್ಮ ಹೇಳಿಕೆಗಳನ್ನು ದಾಖಲು ಮಾಡಿದ್ದಾರೆ.
“ನಾನು ನಿರ್ಮಾಣ ಮಾಡಿದ್ದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾವು ಜನವರಿಯಲ್ಲಿ ತೆರೆಕಂಡಿತ್ತು. ಆ ಸಿನಿಮಾದಲ್ಲಿ ಮೂರ್ನಾಲ್ಕು ಕನ್ನಡದ ಹಳೆಯ ಹಾಡುಗಳನ್ನು ಬಳಕೆ ಮಾಡುವ ಅನಿವಾರ್ಯತೆ ಇತ್ತು. ಈ ಸಿನಿಮಾಗೂ ಮುನ್ನ ಆ ಹಾಡುಗಳನ್ನು ಬಳಸಲು ಅನುಮತಿಗಾಗಿ ಎಂಆರ್ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ, ಹೆಚ್ಚಿನ ಮೊತ್ತ ಕೇಳಿದ್ದರು. ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಎನಿಸಲಿಲ್ಲ. ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಹೋಯಿತು. ಈ ಸಿನಿಮಾದ ರಿಲೀಸ್ ನಂತರ ಅವರು ಕೇಸ್ ಹಾಕಿದ್ದಾರೆ ಎಂದಿದ್ದಾರೆ.
ಮೊದಲಿಗೆ ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ? ಸಾಂದರ್ಭಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೆ. ಕಾಪಿರೈಟ್ ಆಕ್ಟ್ ಏನು ಹೇಳುತ್ತೆ ಎಂಬುದನ್ನು ಕೋರ್ಟ್ನಲ್ಲಿ ನೋಡೋಣ. ನ್ಯಾಯಾಲಯ ತೀರ್ಮಾನ ಮಾಡಲಿ. ಈ ಬಗ್ಗೆ ನಮಗೂ ಅರ್ಥವಾಗಲಿ ಯಾವುದೂ ಬಳಸಬೇಕು ಯಾವುದು ಬಳಸಬಾರದು ಎಂದು. ನಮ್ಮ ಪ್ರಕಾರ, ಇದು ಸರಿ ಅಂತಾ ವಾದ ಮಾಡ್ತೀನಿ ಎಂದಿದ್ದಾರೆ