ಒಡಿಶಾ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಗಾಯಾಳುಗಳ ಚೀರಾಟ ಮುಗಿಲು ಮುಟ್ಟಿದೆ. ಎಲ್ಲೆಲ್ಲೂ ರಕ್ತ ಹರಿಯುತ್ತಿದೆ. ಬೋಗಿಗಳ ನಡುವೆ ಸಿಕ್ಕಿಹಾಕಿಕೊಂಡ ನೂರಾರು ಮಂದಿ ನೆರವಿಗಾಗಿ ಮೊರೆ ಇಟ್ಟ ಹೃದಯ ವಿದ್ರಾವಕ ಘಟನೆ ನಡೆದಿದ್ದು ದೇಶವೇ ಸಂತಾಪ ಸೂಚಿಸಿದೆ. ಬಹನಾಗಾ ಬಜಾರ್ ನಿಲ್ದಾಣದ ಸಮೀಪ ರಾತ್ರಿ 7.20ರ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ.
ಈಗಾಗಲೇ ಸಾವಿನ ಸಂಖ್ಯೆ 238 ಕ್ಕೆ ಏರಿಕೆಯಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಹೆಚ್ಚಿನ ಸಾವು ನೋವುಗಳ ವರದಿಯಾಗಿದೆ. ಅಪಘಾತದಲ್ಲಿ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಒಡಿಶಾ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ಸುಧಾಂಶು ಸಾರಂಗಿ, ರಕ್ಷಣಾ ತಂಡಗಳು 200 ಕ್ಕೂ ಹೆಚ್ಚು ಮೃತದೇಹಗಳನ್ನು ಪತ್ತೆಹಚ್ಚಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಭೀಕರ ದುರಂತದ ಹಿನ್ನಲೆ ಬಾಲಸೋರ್ ಜಿಲ್ಲೆಯಲ್ಲಿ ಹಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರ ವಿಳಂಬವಾಗಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೆಂಗಳೂರು ಬೈಯಪ್ಪನಹಳ್ಳಿ ನಿಲ್ದಾಣದಿಂದ 1,294 ಪ್ರಯಾಣಿಕರು ಅಪಘಾತಕೀಡಾದ ಯಶವಂತಪುರ – ಹೌರಾ ರೈಲಿನಲ್ಲಿ ತೆರಳುತ್ತಿದ್ದರು. ಯಶವಂತಪುರದಿಂದ ಪಶ್ಚಿಮ ಬಂಗಾಳದ ಹೌರಾಗೆ ರೈಲು ತೆರಳುವಾಗ 1,294 ಪ್ರಯಾಣಿಕರ ಬಗ್ಗೆ 994 ಮಂದಿ ಬುಕ್ ಮಾಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.