ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ಜನರಲ್ಲಿ ಮತ್ತೊಂದು ಸುತ್ತಿನ ಭಯ ಹುಟ್ಟುಹಾಕಿದೆ. ದಿನೇ ದಿನೇ ಚಿಕಿತ್ಸೆ ಫಲಕಾರಿಯಾಗದೇ ಕೊರೊನಾ ಸೋಂಕಿತರು ಮೃತಪಡುತ್ತಿರುವವರ ಸಂಖ್ಯೆಯೂ ಏರುತ್ತಿದ್ದು, ಹಲವೆಡೆ ಅಂತ್ಯಸಂಸ್ಕಾರ ನಡೆಸುವುದಕ್ಕೂ ಪರದಾಡಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಪ್ರತಿದಿನ ಕುಟುಂಬಸ್ಥರು ಪರದಾಡುತ್ತಿದ್ದು, ಚಿತಾಗಾರದ ಬಳಿ ಸಾಲು ಸಾಲು ಆಯಂಬುಲೆನ್ಸ್ ಗಳು ಶವಗಳನ್ನು ತಂದು ನಿಲ್ಲುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶವಸಂಸ್ಕಾರಕ್ಕೆ ಹೊಸ ಸೂತ್ರವನ್ನು ಸಿದ್ಧಪಡಿಸಿದ್ದು, ಮೃತರ ಜಮೀನಿನಲ್ಲೇ ಶವಸಂಸ್ಕಾರ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಈ ಸಂಬಂಧ ಮಾಹಿತಿ ನೀಡಿದ ಸಚಿವ ಆರ್. ಅಶೋಕ್, ಜಿಲ್ಲಾ ಆರೋಗ್ಯಧಿಕಾರಿಯಿಂದ ಅನುಮತಿ ಪಡೆದು ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಅವರ ಜಮೀನಿನಲ್ಲೇ ನಡೆಸಬಹುದು. ಅಂತ್ಯಸಂಸ್ಕಾರದ ವೇಳೆ ಮಾರ್ಗಸೂಚಿ ಉಲ್ಲಂಘಿಸುವಂತಿಲ್ಲ. ಪ್ರೋಟೋಕಾಲ್ ಪ್ರಕಾರವೇ ಶವಸಂಸ್ಕಾರ ಮಾಡಬೇಕು ಎಂದರು.